Thursday, November 27, 2025

ಶ್ರೀ ಎಸ್ ಎಲ್ ಭೈರಪ್ಪ - ಕೆಲವು ನೆನಪುಗಳು



ಇತ್ತೀಚೆಗೆ ಶ್ರೀ ಎಸ್ ಎಲ್ ಭೈರಪ್ಪನವರು ನಿಧನರಾದಾಗ, ಅವರ ಬಗ್ಗೆ ಕೆಲವು ನೆನಪುಗಳು ಒಂದಾದ ಮೇಲೆ ಒಂದು ನನ್ನ ಮನಸ್ಸಿನಲ್ಲಿ ಹರಿದು ಹೋದವು. ಅವುಗಳಲ್ಲಿ ಕೆಲವು ಭೈರಪ್ಪನವರನ್ನು ಚೆನ್ನಾಗಿ ಬಲ್ಲವರಿಗೂ ತಿಳಿಯದಿರುವ ವಿಷಯಗಳು ಇರುವ ಸಾಧ್ಯತೆ ಇರುವುದರಿಂದ ಅವುಗಳನ್ನು ಇಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ನನಗೆ ಅವರ ಪರಿಚಯವಾದದ್ದು ನಮ್ಮ ತಂದೆ ಶ್ರೀ ಜೆ ಆರ್ ಲಕ್ಶ್ಮಣರಾಯರ ಮೂಲಕ. 

ಒಂದು ಬಾರಿ ಅವರು ನಮ್ಮ ಕುಟುಂಬದವರನ್ನೆಲ್ಲ ಅವರ ಮನೆಗೆ ಸಾಯಂಕಾಲದ ಚಹಾ ಸೇವನೆಗೆ ಆಹ್ವಾನಿಸಿದ್ದರು. ಅವರ ಮನೆ, ಆಗ ಮೈಸೂರಿನ ಝಾನ್ಸಿ ಲಕ್ಷ್ಮಿಬಾಯಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಹೈಸ್ಕೂಲಿನ ಮುಂದಿದ್ದ ಒಂದು ಓಣಿಯಲ್ಲಿತ್ತು. ಆ ಓಣಿ ಪ್ರೊ. ಯಾಮುನಾಚಾರ್ಯ ಅವರ ಮನೆ "ವೇದ ಗೃಹಂ"ನ ಪಕ್ಕದಲ್ಲಿತ್ತು. ಈ ವಿಷಯವನ್ನು ಹೇಳಲು ಒಂದು ಕಾರಣವಿದೆ. ನನಗೆ ಇತ್ತೀಚೆಗೆ ತಿಳಿದ ವಿಷಯವೇನೆಂದರೆ, ಭೈರಪ್ಪನವರ ವಿದ್ಯಾಭ್ಯಾಸದ ಮೇಲೆ ಯಾಮುನಾಚಾರ್ಯರ ಪ್ರಭಾವ ಬಹು ಮುಖ್ಯವಾದದ್ದು ಎಂಬುದು. ಭೈರಪ್ಪನವರು ಆ ವಿಷಯದ ಬಗ್ಗೆ ಅವರ ಆತ್ಮಚರಿತ್ರೆ ’ಭಿತ್ತಿ’ಯಲ್ಲಿ ವಿಷದವಾಗಿ ಬರೆದಿದ್ದಾರೆಂದು. ಆ ಮನೆ ನನಗೆ ನಿಕಟವಾಗಿ ಪರಿಚಯವಿದ್ದ ಮನೆ. ಏಕೆಂದರೆ ಯಾಮುನಾಚಾರ್ಯರ ಮೊಮ್ಮಗ, ನಾರಾಯಣಪ್ರಸಾದ್ (ನಾನ), ನನ್ನ ಗೆಳೆಯ. 

ನಮ್ಮ ತಂದೆಯವರು, ಭೈರಪ್ಪನವರು ಮಾತನಾಡುತ್ತಿದ್ದಾಗ ನಮ್ಮ ಕೆಲಸ ಬರೀ ಅದನ್ನು ಕುತೂಹಲದಿಂದ ಕೇಳುವುದು ಮಾತ್ರವಾಗಿತ್ತು. ಅದರಲ್ಲಿ ನನಗೆ ನೆನಪಿರುವ ಒಂದೇ ವಿಷಯವೆಂದರೆ ಭೈರಪ್ಪನವರು "ನಾನು ಊಟ ಮಾಡುವಾಗ ಪ್ರತಿ ತುತ್ತನ್ನೂ ಇಪ್ಪತ್ತೆಂಟು ಬಾರಿ ಅಗಿಯುತ್ತೇನೆ" ಎಂದದ್ದು. ನಮ್ಮ ತಂದೆ ನಕ್ಕು, ನಿಮಗೆ ಬೋರ್ ಆಗಲ್ವ ಎಂದು ಕೇಳಿದರು. ಭೈರಪ್ಪನವರು, ಅವರು ಶೇಖರಿಸಿದ್ದ ಲಾಂಗ್ ಪ್ಲೇಯಿಂಗ್ ರೆಕಾರ್ಡುಗಳನ್ನು (33 1/3 rpm, LPs) ತೋರಿಸಿ, "ಅದಕ್ಕೇ ಇವು ಇರೋದು" ಎಂದರು. ಯಾವುದೋ ಒಂದು ರೆಕಾರ್ಡನ್ನು ಹಾಕಿ ಅದನ್ನು ಕೇಳುತ್ತಾ, ಪ್ರತಿ ತುತ್ತನ್ನೂ ಇಪ್ಪತ್ತೆಂಟು ಬಾರಿ ಅಗಿದು ತಿನ್ನುವುದು ಅವರ ಪರಿಪಾಠವಂತೆ!

ಅವರ ಆ ಸಂಗ್ರಹದಲ್ಲಿ ಬರೇ ಹಿಂದುಸ್ಥಾನಿ ಸಂಗೀತವಿತ್ತು. ಭೈರಪ್ಪನವರ ಪ್ರಕಾರ ಕರ್ನಾಟಕ ಸಂಗೀತದಲ್ಲಿ ಏನೂ ಹುರುಳಿಲ್ಲ. ಸಂಗೀತವೆಂದರೆ ಉತ್ತರಾದಿ ಸಂಗೀತ ಮಾತ್ರ! ಅವರ ಆ ಅಭಿಪ್ರಾಯ ನನಗೆ ಬಹಳ ಅಸಮಾಧಾನ ತಂದಿತ್ತು. ನನ್ನ ಇನ್ನೊಬ್ಬ ಸ್ನೇಹಿತ, ಉದಯ್, ಭೈರಪ್ಪನವರ ಮಗನ ಸ್ನೇಹಿತ ಕೂಡ. ಅವನು ಇತ್ತೀಚೆಗೆ ಹೇಳಿದ ವಿಷಯವೆಂದರೆ, ಅವನು ಭೈರಪ್ಪನವರಿಗೆ ತಿರುವಡುತ್ತುರೈ ಟಿ ಎನ್ ರಾಜರತ್ನಂ ಪಿಳ್ಳೆ ಅವರ ನಾದಸ್ವರದ ಒಂದು ಕ್ಯಾಸೆಟ್ ಕೊಟ್ಟಿದ್ದನಂತೆ. ಕರ್ನಾಟಕ ಸಂಗೀತದಲ್ಲಿ ಅವರಿಗೆ ಹಿಡಿಸಿದ ಸಂಗೀತ ಅದೊಂದೇ ಅಂತೆ!

ಒಂದು ಬಾರಿ, ನಮ್ಮ ತಂದೆ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟಿದ್ದರಂತೆ. ಬಸ್ಸು ಮದ್ದೂರಿನಲ್ಲಿ "ಕಾಫ಼ಿ"ಗೆ ನಿಲ್ಲಿಸಿದಾಗ ನಮ್ಮ ತಂದೆ ಅಲ್ಲಿನ ಹೋಟೆಲಿನ ಕಡೆ ಹೋಗುತ್ತಿದ್ದಾಗ ಭೈರಪ್ಪನವರು ಹಿಂದಿನಿಂದ ಬಂದು, "ನಮಸ್ಕಾರ, ಮೊದಲು ಇದನ್ನು ಕೇಳಿ. ಎಲ್ಲರ ಮುಂದೆ ನನ್ನನ್ನು ಭೈರಪ್ಪನವರೇ ಎಂದು ಕರೆದು ಬಿಡಬೇಡಿ!" ಎಂದರಂತೆ. ನಮ್ಮ ತಂದೆ ಆಶ್ಚರ್ಯಚಕಿತರಾಗಿ ಏಕೆಂದು ಕೇಳಿದಾಗ ಅವರ ಉತ್ತರ ಸುಮಾರು ಹೀಗಿತ್ತು: "ನಾನು ಬರಹಗಾರ ಅಂತ ಗೊತ್ತಾದ್ರೆ ಜನ ನನ್ನೊಡನೆ ನೈಜವಾಗಿ ಮಾತನಾಡಲ್ಲ. ಅವರ ನಿಜವಾದ ಭಾವನೆಗಳು, ವಿಚಾರಗಳು ಆಚೆ ಬಂದು ನನ್ನ ಬರಹಕ್ಕೆ ಗ್ರಾಸವಾಗುವ ಅವಕಾಶ ತಪ್ಪಿ ಹೋಗತ್ತೆ. ಅದಿಕ್ಕೇ ಏನೋ ಸುಳ್ಳು ಹೆಸರು ಹೇಳಿ, ವಿದ್ಯಾರಣಯಪುರಂನಲ್ಲಿ ದಿನಸಿ ಅಂಗಡಿ ಇಟ್ಟಿದೀನಿ ಅಂತ ಪಕ್ಕದಲ್ಲಿ ಕೂತಾತನಿಗೆ ಹೇಳಿಬಿಟ್ಟಿದೀನಿ. ನನ್ನ ಗುಟ್ಟು ರಟ್ಟು ಮಾಡಿಬಿಡಬೇಡಿ!" ಇದು ಪ್ರಸಿದ್ಧ ಲೇಖಕ ಸಾಮರ್ಸೆಟ್ ಮಾಮ್‍ನ ವಿಚಾರಕ್ಕೆ ತದ್ವಿರುದ್ಧವಾದದ್ದು. ಅವನ ಪ್ರಕಾರ, ಜನಕ್ಕೆ ತಮ್ಮ ಕತೆ ಹೊರಬರಬೇಕು ಅನ್ನುವ ಆಸೆ ಇರುತ್ತದೆ. ಆದ್ದರಿಂದ ತಾನು ಬರಹಗಾರ ಅಂತ ಗೊತ್ತಾದ ತಕ್ಷಣ ತಮ್ಮ ಜೀವನವನ್ನು ಅವನ ಮುಂದೆ ಬಿಚ್ಚಿಡುತ್ತಾರೆ. ಅದೇ ಅವನ ಕತೆಗಳ ಭಾಗವಾಗಿ ಹೊರ ಬರುತ್ತವೆ! ಅವರಿಬ್ಬರಲ್ಲಿ ಯಾರು ಸರಿಯೋ ಗೊತ್ತಿಲ್ಲ. ಇಬ್ಬರೂ ಸರಿ ಇರಬಹುದೆನ್ನಿ.

ಒಂದು ಬಾರಿ ಭೈರಪ್ಪನವರ ಮನೆಗೆ ಯಾವುದೋ ಕಾರಣಕ್ಕೆ ಹೋಗಿದ್ದಾಗಿನ ಎರಡು ಘಟನೆಗಳು ನೆನಪಿಗೆ ಬರುತ್ತವೆ. ಅವರು ನನ್ನ ಬಗ್ಗೆ ವಿಷದವಾಗಿ ವಿಚಾರಿಸಿದರು. ಅವರ ಕತೆಯ ಯಾವುದಾದರೂ ಪಾತ್ರಕ್ಕೆ ನಾನು ವಿವರಗಳನ್ನು ಕೊಡುತ್ತಿದ್ದೆನೇನೋ ಎಂದು ಕೆಲವು ಸಲ ಯೋಚನೆ ಬಂದಿದೆ. ನಾನು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಎಂದು ಹೇಳಿದಾಗ ಅವರು "ನನ್ನ ರೇಡಿಯೋ ಕೆಟ್ಟುಹೋದರೆ ಅದನ್ನು ಸರಿಪಡಿಸಲು ಬರುತ್ತೋ" ಎಂದು ಕೇಳಿದರು. ನಾನು ಇಲ್ಲ ಎಂದಾಗ, ಹಾಗಾದರೆ ನೀನು ಹೇಗೆ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಎನ್ನುವ ಪ್ರಶ್ನೆ ಕೇಳಿದರು. ನಾನು ಅದಕ್ಕೆ, ಎಲೆಕ್ಟ್ರಾನಿಕ್ಸಿನಲ್ಲಿ ವಿವಿಧ ಕ್ಷೇತ್ರಗಳಿವೆ. ನನ್ನದು ಪವರ್ ಎಲೆಕ್ಟ್ರಾನಿಕ್ಸ್ ಕ್ಷೇತ್ರ. ಅದರಲ್ಲಿನ ಉಪಕರಣಗಳನ್ನು ರೆಪೇರಿ ಮಾಡುವುದಷ್ಟೇ ಅಲ್ಲ ಅವುಗಳನ್ನು ವಿನ್ಯಾಸ ಕೂಡ ಮಾಡುತ್ತೇನೆ ಎಂದು ಹೇಳಿದೆ. ಅವರಿಗೆ ತೃಪ್ತಿಯಾದಂತೆ ಕಾಣಲಿಲ್ಲ. ಅವರಿಗೆ ತೃಪ್ತಿಯಾಯಿತೋ ಇಲ್ಲವೋ ಅನ್ನುವುದು ಅವರ ಮುಖಭಾವದಿಂದ ಕಂಡು ಹಿಡಿಯುವುದಂತೂ ಕಷ್ಟದ ಕೆಲಸ. ಸಾಧಾರಣವಾಗಿ ಅವರ ಮುಖದಲ್ಲಿ ನಿರ್ಲಿಪ್ತತೆಯೊಂದೇ ಕಾಣುತ್ತಿದ್ದು ಯಾವ ಭಾವನೆಗಳೂ ವ್ಯಕ್ತವಾಗುತ್ತಿರಲಿಲ್ಲ.

ಅದೇ ಬಾರಿ ನಡೆದ ಇನ್ನೊಂದು ಘಟನೆ ಎಂದರೆ ಅವರು ಅವರ ಶ್ರೀಮತಿಯವರಿಗೆ ನನಗೊಂದು ಪುರಿ ಉಂಡೆ ಕೊಡುವಂತೆ ಹೇಳಿದರು. ಅವರು ತಂದಿಟ್ಟ ಆ ಉಂಡೆಯ ಗಾತ್ರ ನಾನು ಹೌಹಾರಿದ್ದೆ. ನಾನೆಂದೂ ನೋಡಿರದಂತಹ ಗಾತ್ರದ್ದು. ಸಣ್ಣ ಚಕ್ಕೋತನ ಹಣ್ಣು ಅನ್ನಿ. ನಾನು ಅದನ್ನು ಹೇಗೆ ತಿನ್ನಬೇಕು ಎಂದು ಯೋಚಿಸಿದೆ ಎನ್ನುವುದಕ್ಕಿಂತ ಅದರ ಮೇಲೆ ಹೇಗೆ ದಾಳಿ ಮಾಡಬೇಕು ಎಂದು ಯೋಚಿಸಿದೆ ಅನ್ನುವುದೇ ಸೂಕ್ತವೇನೋ! ಅದನ್ನು ಹಿಡಿದು ಮುರಿಯಲು ಹೋದೆ. ನೀನು ಅದನ್ನು ಕಚ್ಚಿಯೇ ತಿನ್ನಬೇಕು ಎಂದು ತಾಕೀತು ಮಾಡಿದರು. ಅದನ್ನು ತಿನ್ನಲು ನಾನು ನೀರು ಕುದುರೆಯಂತೆ ಬಾಯಿ ತೆರೆಯಬೇಕಿತ್ತು! ಹಾಗೇ ಕಷ್ಟಪಟ್ಟು ಸ್ವಲ್ಪ ತಿಂದು, ಇದನ್ನು ಪೂರ್ತಿ ತಿನ್ನಲು ಸಮಯವಾಗುತ್ತೆ. ನಾನು ಇನ್ನೆಲ್ಲಿಗೋ ಹೋಗಬೇಕು ಎಂದು ಸಬೂಬು ಹೇಳಿದೆ. ಅವರ ಶ್ರೀಮತಿಯವರಿಗೆ ನನ್ನ ಮೇಲೆ ಕರುಣೆ ಮೂಡಿ ಕಾಗದದ ಪೊಟ್ಟಣದಲ್ಲಿ ಅದನ್ನು ಕಟ್ಟಿಕೊಟ್ಟು ಬೀಳ್ಕೊಟ್ಟರು. ಆ ಉಂಡೆ ಬಹಳ ರುಚಿಕರವಾಗಿತ್ತು ಎನ್ನುವುದು ನೆನಪಿದೆ.

ಇನ್ನೊಂದು ಬಾರಿ, ಶ್ರೀ ಸಿಂಧುವಳ್ಳಿ ಅನಂತಮೂರ್ತಿಯವರ ಮನೆಯಲ್ಲಿ ಏನೋ ಸಂದರ್ಭ. ಹತ್ತಾರು ಜನರನ್ನು ರಾತ್ರಿಯ ಊಟಕ್ಕೆ ಕರೆದಿದ್ದರು. ಅದರಲ್ಲಿ ಕೆಲವರು ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದಾಗ, ಕನ್ನಡಿಗರಲ್ಲಿ ಇಂಗ್ಲಿಷ್ ಮತ್ತಿತರ ಬಾಷೆಗಳ ಉಪಯೋಗ ಮತ್ತು ಹೊರಗಿನವರು ಕರ್ನಾಟಕಕ್ಕೆ ಬಂದು ನೆಲಸಿಯೂ ಕನ್ನಡ ಕಲಿಯದಿರುವ ವಿಷಯ ಪ್ರಸ್ತಾಪಕ್ಕೆ ಬಂತು. ಭೈರಪ್ಪನವರ ವ್ಯಾಖ್ಯಾನ ಹೀಗಿತ್ತು: ಕನ್ನಡಿಗರು ನಾಯಕಸಾನಿಗಳ ತರಹ. ಯಾರು ಬಂದರೂ ನೀನೇ ದೊಡ್ಡವನು ಎನ್ನುವಂತೆ ವರ್ತಿಸುತ್ತೇವೆ. ನಿನಗೆ ಕನ್ನಡ ಬರಲ್ವಾ? ನಾನೇ ತಮಿಳು ಮಾತಾಡ್ತೀನಿ. ಹಿಂದಿ ಮತಾಡ್ತೀನಿ, ಅನ್ನೋ ಜಾಯಮಾನ ಎಂದು ಖಾರವಾಗಿ ಹೇಳಿದರು. ಆಗಲೂ ಅವರ ಮುಖದ ಮೇಲೆ ಯಾವುದೇ ಭಾವವೂ ಗೋಚರವಾಗಲಿಲ್ಲ!

ಭೈರಪ್ಪನವರು ಒಮ್ಮ ಇಂಗ್ಲೆಂಡಿಗೆ ಹೋಗಿ ಬಂದ ನಂತರ ನಮ್ಮ ತಂದೆಯವರನ್ನು ಕಾಣಲು ನಮ್ಮ ಮನೆಗೆ ಬಂದಿದ್ದರು. ನಮ್ಮಲ್ಲಿದ್ದ ಬೆತ್ತದ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ನಮ್ಮ ತಂದೆಯವರು ಅರಾಮವಾಗಿ ಒರಗಿ ಕೂತಿದ್ದರೂ ಭೈರಪ್ಪನವರು ಒರಗದೆ, ನೆಟ್ಟಗೆ ಕುಳಿತು ಮಾತನಾಡುತ್ತಿದ್ದರು (ಆಡು ಭಾಷೆಯಲ್ಲಿ, ಗೂಟಗುಮ್ಮನ ತರಹ). ಸ್ವಲ್ಪ ಸಮಯದ ನಂತರ ನಮ್ಮ ತಂದೆಯವರು ಅವರನ್ನು ಹಾಗೇಕೆ ಕುಳಿತಿದ್ದೀರಿ ಎಂದು ಕೇಳಿದರು. ಅವರು ಕೊಟ್ಟ ಉತ್ತರ ಸುಮಾರು ಹೀಗಿತ್ತು. ಅವರನ್ನು ಕಾಡುತ್ತಿದ್ದ ಬೆನ್ನು ನೋವಿನ ಬಗ್ಗೆ ಇಂಗ್ಲೆಂಡಿನಲ್ಲಿ ಯಾವುದೋ ವೈದ್ಯನನ್ನು ಕಂಡರಂತೆ. ಅವನ ಪ್ರಕಾರ, ದೇಹದ ಎಲ್ಲ ಖಾಯಿಲೆಗಳಿಗೂ ಕೆಟ್ಟ ಭಂಗಿಯೇ ಕಾರಣ.  ಬೆನ್ನು ಹುರಿಯ ಸ್ವಾಭಾವಿಕ ಆಕಾರ ಸುಮಾರು ಇಂಗ್ಲಿಷ್ ಅಕ್ಷರ ಎಸ್ (s)  ನಂತೆ. ಅಂದರೆ, ಹುರಿಯ ಕೆಳಗಿನ ಭಾಗ ಹೊಟ್ಟೆಯ ಕಡೆಗೆ ಬಾಗಿ ಬೆನ್ನಿನ ಕೆಳಗಿನ ಭಾಗ ನಿಮ್ನವಾಗಿರಬೇಕು (concave). ನಾವು ಒರಗಿ ಕೂತರೆ ಆ ಭಾಗ ಪೀನವಾಗುತ್ತದೆ (convex). ಅದರ ಪರಿಣಾಮವಾಗಿ ಎಲ್ಲಾ ತರಹದ ಕಾಯಿಲೆಗಳೂ ಬರಬಹುದು. ಆದ್ದರಿಂದ ಹಾಗೆ ನೆಟ್ಟಗೆ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದರು. ಅಷ್ಟಾಗಿಯೂ ಬೆನ್ನು ನೋವು ಅವರನ್ನು ಬಾಧಿಸುತ್ತಿತ್ತು ಎಂದು ಕೇಳಿದ ನೆನಪು. ಅವರು ಹೇಳಿದ್ದನ್ನು ನೆನೆದರೆ, ಅವರು ಯಾರೋ ಕೈರೋಪ್ರಾಕ್ಟರನ್ನು (chiroptactor) ಕಂಡಿದ್ದಿರಬೇಕು. ಪುರಾವೆ ಆಧಾರಿತ, ವೈಜ್ಞಾನಿಕ ವೈದ್ಯನನ್ನಲ್ಲ ಎನಿಸುತ್ತದೆ.

ಒಂದು ಬಾರಿ ಪೋಲ್ಯಾಂಡ್ ಮೂಲದ ನನ್ನ ಸಹೋದ್ಯೋಗಿಯೊಬ್ಬ ಬೆಂಗಳೂರನ್ನು ಬಿಟ್ಟು ನೆದರ್ಲ್ಯಾಂಡಿಗೆ ಹೊರಟುಹೋಗುವವನಿದ್ದ. ಅವನು ನಮ್ಮ ವಿಭಾಗದ ಸಹೋದ್ಯೋಗಿಗಳನ್ನೆಲ್ಲ ಬೆಂಗಳೂರಿನ ಪ್ರಸಿದ್ಧ ಎಂಟಿಆರ್‍ಗೆ ಮಧ್ಯಾಹ್ನದ ಊಟಕ್ಕೆ ಕರೆದೊಯ್ದಿದ್ದ. ಅಲ್ಲಿ ಕುಳಿತಿದ್ದಾಗ, ಭೈರಪ್ಪನವರು ಒಳಬಂದು ಯಾರನ್ನೋ ಹುಡುಕುತ್ತಿದ್ದರು. ನನ್ನ ಸಹೋದ್ಯೋಗಿ-ಸ್ನೇಹಿತನೊಬ್ಬ, ಶ್ರೀಧರನ್, ಅವರ ಅಭಿಮಾನಿ. ನಾನು ಅವರನ್ನು ಮಾತನಾಡಿಸಿ ಬರುತ್ತೇನೆ ಎಂದು ಎದ್ದಾಗ ಆತನೂ ನನ್ನೊಡನೆ ಅವರನ್ನು ಕಾಣಲು ಬಂದ. ನಾನು ಆತನನ್ನು ಅವರಿಗೆ ಪರಿಚಯಿಸಿ ಉಭಯ ಕುಶಲೋಪರಿ ಮುಗಿಸಿ ಬಂದೆ. ನನ್ನ ಸ್ನೇಹಿತನಿಗಂತೂ ಬಹಳ ಸಂತೋಷವಾಯ್ತು. ಅವರ ಮುಖ ಮಾತ್ರ ಎಂದಿನಂತೆ - ನಾವು ಮಾತನಾಡಿಸಿದ್ದು ತಪ್ಪಾಯಿತೇನೋ ಎನ್ನಿಸುವಂತೆ ಇತ್ತು!

 

 

Friday, March 21, 2025

ಜಗಲೂರಿನ ವಡ್ಡರ ತಿಮ್ಮ



ನಾನು ಮೊದಲ ಬಾರಿ "ನಮ್ಮೂರಿಗೆ" ಹೋದದ್ದು ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ. ಅದು ನಮ್ಮ ತಂದೆಯವರ ಊರು - ಜಗಲೂರು. ಆ ಊರಿನ ಮತ್ತು  ಅಲ್ಲಿನ ವ್ಯಕ್ತಿಗಳ ಕತೆಗಳನ್ನು ನಮ್ಮ ತಂದೆ (ನಾವು ಅವರನ್ನು ಅಣ್ಣ ಎಂದು ಕರೆಯುತ್ತಿದ್ದೆವು. ಇನ್ನು ಮುಂದೆ ಅಣ್ಣ ಎಂದೇ ಹೇಳುತ್ತೇನೆ) ಬಹಳ ಸ್ವಾರಸ್ಯಕರವಾಗಿ ಅಗಾಗ್ಗೆ ಹೇಳುತ್ತಿದ್ದುದರಿಂದ ಅದರ ಚಿತ್ರವೊಂದು ನನ್ನ ಮನಸಿನಲ್ಲಿ ಮೂಡಿ ಬಿಟ್ಟಿತ್ತು. ಅಲ್ಲದೆ ಅದು ನಮ್ಮ ಊರು ಅನ್ನುವ ಭಾವನೆ ಬೆಳೆದು ಬಿಟ್ಟಿತ್ತು. ಈಗ ಯೋಚಿಸಿದರೆ ನನಗೇ ಅದು ಹಾಸ್ಯಾಸ್ಪದ ಎನಿಸುತ್ತದೆ.  ಇದನ್ನು ಓದುತ್ತಿರುವ ನಿಮಗೆ ಅದು ಹಾಸ್ಯಾಸ್ಪದ ಎನಿಸಿದರೆ ನನ್ನದೇನೂ ತಗಾದೆ ಇಲ್ಲ.

ಜಗಲೂರಿಗೆ ಹೋಗಿ, ಅಣ್ಣನ ಮನೆ, ಮನೆಯಿದ್ದ ರಸ್ತೆ, ಕೆರೆ, ರಾಮಮಂದಿರ, "ಸೀನೀರ್ಬಾವಿ" ಇವುಗಳನ್ನೆಲ್ಲ ನೋಡುತ್ತಿದ್ದರೆ ಅವು ಸಂಪೂರ್ಣ ಹೊಸದೂ,  ಚಿರಪರಿಚಿತವೂ ಎನಿಸಿದ್ದವು. ಆಲ್ಲಿದ್ದಾಗಿನ ಘಟನೆಗಳಲ್ಲಿ ಕೆಲವು ಇನ್ನೂ ಹಚ್ಚ ಹಸಿರಾಗಿ ನನ್ನ ಮನಸ್ಸಿನಲ್ಲಿ ಉಳಿದಿವೆ - ಸುಮಾರು ಐವತ್ತು ವರ್ಷಗಳ ನಂತರವೂ ಸಹ. ಅವುಗಳಲ್ಲಿ ಕೆಲವನ್ನು ಹಂಚಿಕೊಳ್ಳುವ ಪ್ರಯತ್ನ ಇದು.

ಅಣ್ಣನ ಪ್ರೀತಿಪಾತ್ರ ಚಿಕ್ಕಪ್ಪನವರೂ, ವಿದ್ಯಾಗುರುಗಳೂ ಆದ "ರಾಘ್ಕಕ್ಕ" ಆಗ ಇನ್ನೂ ಅಲ್ಲಿದ್ದರು. ಅವರು ನಮ್ಮ ತಾತನ ಸೋದರಸಂಬಂಧಿ. ರಾಘ್ಕಕ್ಕ ಆವರನ್ನು ಎಂದೂ ಕಾಣದೆಯೇ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ಜಗಲೂರಿನ ಶಾಲೆಯಲ್ಲಿ ಅವರು ಮೇಷ್ಟ್ರಾಗಿದ್ದು ಅಣ್ಣನಿಗೆ ಪಾಠ ಹೇಳಿದ್ದರು.  ಅಣ್ಣನ ಪ್ರಕಾರ ಅಣ್ಣ ಒಳ್ಳೆಯ ಇಂಗ್ಲಿಷ್ ಕಲಿತಿದ್ದಕ್ಕೆ ರಾಘ್ಕಕ್ಕನವರೇ ಕಾರಣ.  ನಮ್ಮ ತಾತನವರಿಗೇ ಅಣ್ಣನ ಮೇಲೆ ಸಕಾರಣದಿಂದ ವಿಶ್ವಾಸ ಕಳೆದು ಹೋಗಿದ್ದ ಕಾಲದಲ್ಲಿ ರಾಘ್ಕಕ್ಕ ವಿಶ್ವಾಸವಿಟ್ಟು ಇವನು ಬುದ್ಧಿವಂತ, ಮುಂದೆ ಉದ್ಧಾರವಾಗುತ್ತಾನೆ ಎಂಬ ಭರವಸೆ ಇಟ್ಟುಕೊಂಡು, ಅಣ್ಣನ ವಿದ್ಯಾಭ್ಯಾಸ ಮುಂದುವರಿಯಬೇಕೆಂದು ನಮ್ಮ ತಾತನವರ ಮೇಲೆ ಒತ್ತಾಯ ಮಾಡಿ ತಂದೆಯವರ ಭವಿಷ್ಯವನ್ನು ಕಾಪಾಡಿದವರು ಅವರು.

ರಾಘ್ಕಕ್ಕನವರ ಜೊತೆ, ಸಂಜೆ ರಾಮಮಂದಿರಕ್ಕೆ ಹೋಗಿದ್ದೆ.  ಎಲ್ಲ ರಾಮಮಂದಿರಗಳಂತೆ ಅದೂ ನಿರಾಡಂಬರವಾಗಿತ್ತು. ಅದರ ಆಡಳಿತದ ಜವಾಬ್ದಾರಿ ಹೊತ್ತವರಲ್ಲಿ, ರಾಘ್ಕಕ್ಕನವರೂ ಒಬ್ಬರು. ರಾಮಮಂದಿರದಲ್ಲಿದ್ದ ಒಂದು ಟ್ಯೂಬ್ ಲೈಟ್ ಕೆಲಸಮಾಡುತ್ತಿರಲಿಲ್ಲ. ಯಾರೋ ಅಲ್ಪ ಸ್ವಲ್ಪ ತಿಳಿದವರು ಅದರ ಸ್ಟಾರ್ಟರ್ ಹೋಗಿದೆ, ಬೇರೆ ಹಾಕಿದರೆ ಕೆಲಸ ಮಾಡಬಹುದು ಅಂದಿದ್ದರಂತೆ. ಯಾರೋ ಒಂದು ಸ್ಟಾರ್ಟರ್ ತರಿಸಿಯೂ ಇಟ್ಟಿದ್ದರು. ಆದರೆ ಎತ್ತರದ ಸ್ಟೂಲ್ ಹತ್ತಿ ಹೊಸ ಸ್ಟಾರ್ಟರ್ ಹಾಕುವ ಸಾಮರ್ಥ್ಯ ಅಲ್ಲಿದ್ದ ಹಿರಿಯರಿಗ್ಯಾರಿಗೂ ಇರಲಿಲ್ಲವಾಗಿ, ಊರಿನ ಎಲೆಕ್ಟ್ರೀಷಿಯನ್ನುಗಳಿಗೆ ಇದು ತೀರ ಚಿಲ್ಲರೆ ಕೆಲಸವಾಗಿದ್ದು ಯಾರೂ ಅತ್ತ ಸುಳಿದಿರಲಿಲ್ಲ. ಅದು ವಾರಗಟ್ಟಲೆ ಹಾಗೇ ಉಳಿದಿತ್ತು.

ರಾಘ್ಕಕ್ಕ "ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದ್ತಿದ್ದೀಯ. ಈ ಸ್ಟಾರ್ಟರ್ ಬದಲಾಯಿಸಕ್ಕೆ ಬರುತ್ತೋ?" ಎಂದು ನನ್ನನು ಬಹಳ ಸಂಕೋಚದಿಂದ ಕೇಳಿದರು! ನನಗೆ ಅ ಹಿರಿಯರ ಸಂಕೋಚ ನೋಡಿ ಅಯ್ಯೋ ಅನಿಸಿತು. ಸ್ಟೂಲ್ ತಂದು, ಮೇಲೆ ಹತ್ತಿ ಸ್ಟಾರ್ಟರ್ ಬದಲಾಯಿಸಿದೆ. ದೀಪ ಹತ್ತಿತು. ಅವರಿಗೂ. ರಾಮಮಂದಿರದ ಅರ್ಚಕರಿಗೂ ಆದ ಸಂತೋಷ ಹೇಳತೀರದು. ಅವರಿಬ್ಬರೂ ನನ್ನ ಮೇಲೆ ಅವರ ಮತ್ತು ರಾಮನ ಆಶೀರ್ವಾದಗಳನ್ನು ಯಥೇಚ್ಚವಾಗಿ ಸುರಿದರು. ಈಗಲೂ ಅವರ ಅಸಹಾಯಕತೆ ಅಮಾಯಕತೆಗಳನ್ನು ನೆನೆಸಿಕೊಂಡರೆ ಛೇ ಅನ್ನಿಸುತ್ತದೆ.

ಎರಡನೆಯದು, ಅಣ್ಣನ ಅಪ್ತಮಿತ್ರರಾಗಿದ್ದ ಶ್ರೀ ಫ಼ಕೀರ್ ಸಾಹೇಬರ ತಂದೆ ಶ್ರೀ ಕಾಸಿಮ್ ಸಾಹೇಬರ ಮನೆಗೆ ನಾನು ಮತ್ತು ನನ್ನಕ್ಕ ಹೋಗಿ ಅವರನ್ನು ಕಂಡದ್ದು.  ಆಗ ಸಾಹೇಬರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆವರೊಡನೆ ಒಂದರ್ಧ ಘಂಟೆ ಮಾತನಾಡಿದೆವು. ಅವರ ಮಾತಿನಲ್ಲಿ ಅವರಿಗೆ ಅಣ್ಣನ ಮೇಲಿದ್ದ ಪ್ರೀತಿ, ಅಭಿಮಾನಗಳು ಎದ್ದು ಕಾಣುತ್ತಿದ್ದವು. ನಾವು ಅವರ ಮನೆಯಿಂದ ಹೊರಟಾಗ ಅವರ ಸೊಸೆ ಒಳಗೆ ಹೋಗಿ, ಒಂದು ತಟ್ಟೆಯಲ್ಲಿ ಕುಂಕುಮ, ಎಲೆ ಅಡಿಕೆ, ತೆಂಗಿನಕಾಯಿಗಳನ್ನು ತಂದು, ಅಕ್ಕನ ಹಣೆಗೆ ಕುಂಕುಮ ಇಟ್ಟು, ಎಲೆ ಅಡಿಕೆ, ತೆಂಗಿನಕಾಯಿ ಕೊಟ್ಟು ಕಳಿಸಿದ್ದು ಕಣ್ಣಿಗೆ ಕಟ್ಟಿದಂತಿದೆ.

ಮೂರನೆಯದು ಇದು. ಜಗಲೂರಿನಲ್ಲಿ ನಾವು ತಂಗಿದ್ದು ಅಣ್ಣನ ಸೋದರ ಸಂಬಂಧಿ ಜಗಲೂರು ರಾಮಚಂದ್ರ ಅವರ ಮನೆಯಲ್ಲಿ.  ನಾವು ಅವರನ್ನು ದೊಡ್ಡಪ್ಪ ಎಂದು ಕರೆಯುತ್ತಿದ್ದೆವು. ಅಕ್ಕ, ನಾನು ಚಿತ್ರದುರ್ಗಕ್ಕೋ ಇನ್ನೆಲ್ಲಿಗೋ ಹೋಗಿ ಜಗಲೂರಿಗೆ ಹಿಂದಿರುಗಿದಾಗ ಸಂಜೆ ಸುಮಾರು ಏಳರ ಸಮಯ.  ಮಬ್ಬುಗತ್ತಲು. ಅವರ ಮನೆಯ ಮುಂದೆ ಚರಂಡಿಯ ಪಕ್ಕದಲ್ಲಿ ಹಣ್ಣು ಹಣ್ಣು ಮುದುಕನೊಬ್ಬ ಕುಕ್ಕರುಗಾಲಿನಲ್ಲಿ ಕುಳಿತಿದ್ದ. ನಾವು ಬಂದಕೂಡಲೆ ದೊಡ್ಡಪ್ಪ,  "ತಿಮ್ಮನ್ನ ಕರ್ಸಿದೀನಿ" ಅಂದರು. ಅಣ್ಣ ತಿಮ್ಮನ ಕುರಿತ ಅನೇಕ ಪ್ರಸಂಗಗಳನ್ನು ನಮಗೆ ಅಗಾಗ್ಗೆ ಹೇಳಿದ್ದಿದ್ದರಿಂದ ಆತ ನಮಗೆ ಪರಿಚಯವಾಗಿದ್ದ. ಆದ್ದರಿಂದ ಆತನನ್ನು ಕಂಡಿದ್ದು ನಮಗೆ ಅತ್ಯಂತ ಸಂತೋಷದ ವಿಷಯ  ಮತ್ತು ಆಶ್ಚರ್ಯ ಕೂಡ.  ನಮ್ಮ ತಾತನವರಾದ ಜಗಲೂರು ರಾಘವೇಂದ್ರ ರಾಯರ ಮನೆಯಲ್ಲಿ ಕೆಲಸಕ್ಕಿದ್ದ ಆಳು, ತಿಮ್ಮ. ವಡ್ಡರ* ತಿಮ್ಮ ಅಥವ ಒಡ್ಡರ ತಿಮ್ಮ ಎಂದು ಅವನ ಪರಿಚಯ. ನಮ್ಮ ತಾತನವರ ಆಪ್ತ ಕೆಲಸಗಾರ. ಅವನ ವಯಸ್ಸು ಎಷ್ಟೋ ಅವನಿಗೇ ಗೊತ್ತಿರಲಿಲ್ಲ. **

ತಾತ ಊರಿನ ಮುಖ್ಯಸ್ಥರಲ್ಲೊಬ್ಬ್ಬರು. ಅವರಿಗೆ "The uncrowned king of Jagalur" ಎನ್ನುವ ಅನಧಿಕೃತ ಉತ್ಪ್ರೇಕ್ಷಿತ ಬಿರುದೂ ಇತ್ತೆಂದು ಪ್ರತೀತಿ. ಅವರಿಗೆ ಪಾರಂಪರಿಕವಾಗಿ ಯಾವುದೋ ಹಳ್ಳಿಯ ಶ್ಯಾನುಭೋಗಿಕೆ (ಹಳ್ಳಿಯ ಲೆಕ್ಖಪತ್ರ ಇಡುವ ಕೆಲಸ) ಇದ್ದರೂ ಅದನ್ನು ಬಿಟ್ಟು ಜಗಲೂರಿನಲ್ಲಿದ್ದರು. ಅವರ ಮನೆಯ ಜಗಲಿಯೇ ಅವರ ಕೆಲಸದ ಸ್ಥಳ. ಆಗಿನಿಂದಲೇ work from home! ವೃತ್ತಿಯಲ್ಲಿ ಅವರನ್ನು ಫೂಟ್ಲಾಯರಿ ಅನ್ನಬಹುದು. ಅಂದರೆ ಪದವೀಧರರಲ್ಲದ ವಕೀಲರು. ಜಮೀನು ಮಾರಾಟದ ಪತ್ರ, ಸಾಲದ ಪತ್ರ ಇವುಗಳನ್ನು ಬರೆದು ಕೊಡುವುದು, ಆಸ್ತಿ ವಿಭಜನೆ ಮಾಡಿಕೊಡುವುದು ಇತ್ಯಾದಿ ಅವರ ಆದಾಯದ ಮೂಲ. ಇದರಲ್ಲಿ ಬಹಳ ಒಳ್ಳೆಯ ಹೆಸರು ಮಾಡಿ ಜನಮನ್ನಣೆಗೆ ಪಾತ್ರರಾದವರು ತಾತ. ಪ್ರತಿದಿನ ಬೆಳಿಗ್ಗೆ ಮನೆಯ ಜಗಲಿಯ ಒಪ್ಪ ಓರಣ, ಜಮಖಾನೆ ಹಾಸಿ, ತಾತ ಕುಳಿತುಕೊಳ್ಳಲು, ಒರಗಿಕೊಳ್ಳಲು, ದಿಂಬುಗಳನ್ನಿಟ್ಟು, ಅವರ ಡೆಸ್ಕ್ ಇಟ್ಟು, ಮಸಿ ಕುಪ್ಪಿಗೆ ಮಸಿ ತುಂಬಿಸಿ ಇಟ್ಟು ಇತ್ಯಾದಿ ಕೆಲಸಗಳಿಂದ ಪ್ರಾರಂಭವಾದ ತಿಮ್ಮನ ದಿನ, ರಾತ್ರಿ ಕಂದೀಲು, ಬುಡ್ಡಿ ದೀಪಗಳನ್ನೆಲ್ಲ ಒರೆಸಿ, ಕಲ್ಲೆಣ್ಣೆ ತುಂಬಿ, ದೀಪ ಬೆಳಗಿಸುವುದರಿಂದ ಮುಗಿಯುತ್ತಿತ್ತು.

ಆ ವಯೋವೃದ್ಧ ತಿಮ್ಮನನ್ನು ನಾವು ನೋಡಬೇಕು ಎಂದು ದೊಡ್ಡಪ್ಪ ಅವನಿಗೆ ಬರಹೇಳಿದ್ದರು. ಎತ್ತಿನ ಗಾಡಿ ಕಟ್ಟಿಕೊಂಡು ಆ ಪಾಪದ ಮುದುಕ ಬಂದು ನಮಗೆ ಕಾಯುತ್ತಾ ಕುಳಿತಿದ್ದ! ಅದನ್ನು ಕೇಳಿ ಹೊಟ್ಟೆ ಕಿವಿಚಿದಂತಾಯ್ತು. ನಾವು ಆತನನ್ನು ನೋಡಿದ ಮೇಲೆ ಆತ ಎಂಟು ಹತ್ತು ಕಿಲೋಮೀಟರ್ ದೂರದ ಅವನ ಊರಿಗೆ ಹಿಂತಿರುಗಬೇಕು ! ಎಂಥ ಕ್ರೌರ್ಯ ಎನಿಸಿತು. ಅಷ್ಟೇ ಸಾಲದು ಅನ್ನುವಂತೆ, ದೊಡ್ಡಪ್ಪ ಎತ್ತರದ ಧ್ವನಿಯಲ್ಲಿ ತಿಮ್ಮನನ್ನು ಕೇಳಿದರು - ಕಿವಿ ಸರಿಯಾಗ್ಗಿ ಕೇಳಿಸದ ತಿಮ್ಮನಿಗೆ ಕೇಳಲಿ ಎಂದು - "ಇವರು ಯಾರು ಗೊತ್ತೇನು?" ಆತ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದ. "ರಾಘಣ್ಣನ ಮೊಮ್ಮಕ್ಕಳು, ಅಚ್ಚಣ್ಣನ ಮಕ್ಕಳು." ಅಂದರು ದೊಡ್ಡಪ್ಪ. (ಆಚ್ಚಣ್ಣ, ಅಣ್ಣನನ್ನು ಎಲ್ಲರೂ ಕರೆಯುತ್ತಿದ್ದ ಹೆಸರು. ಲಕ್ಶ್ಮಣ ಹೋಗಿ ಅಚ್ಚಣ್ಣ ಆಗಿತ್ತು. ಕಿರಿಯರಿಗೆಲ್ಲ ಅಣ್ಣ ಅಚ್ಚುಮಾವ ಆಗಿದ್ದರು.) ಆ ಮುದುಕನನ್ನು ನಿಷ್ಕರುಣೆಯಿಂದ ಬರಹೇಳಿದ್ದರಿಂದ ಚಡಪಡಿಸುತ್ತಿದ್ದ ನಮಗೆ ಇನ್ನೊಂದು ಆಘಾತ ಕಾದಿತ್ತು. ಕೂತಲ್ಲಿಂದ ಎದ್ದು ಬಂದ ತಿಮ್ಮ, ದೂಳು ರಸ್ತೆಯನ್ನೂ ಲೆಕ್ಕಿಸದೆ ನಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಿ ಬಿಟ್ಟ.

ತಾತನ ಮೇಲಿದ್ದ ಮರ್ಯಾದೆಯೋ, ಅಣ್ಣನ ಮೇಲಿದ್ದ ಪ್ರೀತಿಯೋ, ತಲೆತಲಾಂತರದಿಂದ ಮೇಲು - ಕೀಳು ಭಾವನೆಯೋ ಅವೆಲ್ಲದರ ಕಲಸುಮೇಲೋಗರವೋ ಗೊತ್ತಿಲ್ಲ, ನಮ್ಮ ತಾತನ ವಯಸ್ಸಿನ ಮುದುಕ ನಮ್ಮ ಕಾಲು ಮುಟ್ಟಿದ್ದ.

ಈಗಲೂ ಅದನ್ನು ನೆನೆಸಿಕೊಂಡರೆ ಅತೀವ ವೇದನೆಯಾಗಿ ಕಣ್ಣು ತೇವವಾಗುತ್ತವೆ,


*ಶ್ರೀ ವಿ ಕೃಷ್ಣ ವಿರಚಿತ ಅಲರ್ ನಿಘಂಟು (https://alar.ink/) ವಡ್ಡ ಎನ್ನುವ ಪದಕ್ಕೆ ಈ ಅರ್ಥ ನೀಡುತ್ತದೆ
 
ವಡ್ಡ
  1. a class of persons engaged in cutting stone, road-work, digging tanks etc.
  2. a member of this class.
 
**ಅಣ್ಣನ ಬಾಲ್ಯದಲ್ಲಿ ಯಾರೋ ಮುದುಕನನ್ನ ನಿನ್ನ ವಯಸ್ಸೆಷ್ಟು ಎಂದು ಕೇಳಿದ್ದರಂತೆ. ಅವನ ಉತ್ತರ, "ನಂಗೊತ್ತಿಲ್ಲ. ಆದರೆ ದಂಗೆ ಆದಾಗ ಆಗ್ತಾನೆ ಬೀಡಿ ಸೇದಕ್ಕೆ ಷುರು ಮಾಡೋ ವಯಸ್ಸು".  ದಂಗೆ ಎಂದರೆ ಮೊದಲನೆ ಸ್ವಾತಂತ್ರ ಸಂಗ್ರಾಮ - 1857. ಬೀಡಿ ಸೇದಕ್ಕೆ ಷುರು ಮಾ



Monday, March 17, 2025

ನಂಗೊತ್ತಿರೋ ಗಾದೆಗಳು ನಾ ಕೇಳಿರೋ ಗಾದೆಗಳು

 

 

ಇಷ್ಟೇ ಅಲ್ಲ, ಜ್ಞಾಪಕ ಬಂದ ಹಾಗೆ ಸೇರಿಸ್ತಿರ್ತೀನಿ

ಇವುಗಳಲ್ಲಿ ಹಲವು ಉಪಮೆಗಳು. ಆದರೆ ಬಳಕೆಯಲ್ಲಿ ಅವುಗಳು ಗಾದೆಗಳನ್ನು ಹೋಲುವುದರಿಂದ ಅವನ್ನೂ ಸೇರ್ಸಿದೀನಿ. ಅಲ್ಲದೆ ಕೆಲವು ಸಂಸ್ಕೃತದ ನಾಣ್ಣುಡಿಗಳನ್ನೂ ಸೇರ್ಸಿದೀನಿ, ಯಾಕಂದ್ರೆ ಅವು ಕನ್ನಡದ್ದೇನೋ ಅನ್ನೋ ಹಾಗೆ ಉಪಯೋಗಿಸ್ತಾರೆ.

 

1.                   ಅಂಗೈಯಲ್ಲಿ ಬೆಣ್ಣೆಇಟ್ಕೊಂಡು ತುಪ್ಪಕ್ ಊರೆಲ್ಲ ಹುಡುಕಿದರಂತೆ

2.                   ಅಂಬಲಿ ಕುಡ್ಯೋವ್ನಿಗೆ ಮೀಸೆ ಹಿಡ್ಯೋವ್ನೊಬ್ಬ

3.                   ಅಕ್ಕಿಮೇಲ್ ಆಸೆ, ನೆಂಟ್ರ್ ಮೇಲ್ ಪ್ರೀತಿ

4.                   ಅಗಸ ಹೊಸದ್ರಲ್ ಗೋಣಿ ಎತ್ತೆತ್ತ್ ಒಗೆದ್ನಂತೆ

5.                   ಅಗಸರ ಕತ್ತೆ ದೊಂಬರಿಗೆ ತ್ಯಾಗ

6.                   ಅತ್ತೆಗೊಂದ್ಕಾಲ ಸೊಸೆಗೊಂದ್ಕಾಲ

7.                   ಅಪ್ಪ ಹಾಕಿದ್ ಆಲದ್ಮರ ಅಂತ ಅದಕ್ ನೇಣು ಹಾಕಿಕೊಳ್ಳಕ್ಕಾಗತ್ಯೇ?

8.                   ಅಪ್ಪಾಭಟ್ಟ್ರ ಮಗಳಾಗಿ, ತಿಪ್ಪಾಭಟ್ಟ್ರ ಸೊಸೆಯಾಗಿ, ಪಂಚ ಪಾಂಡವರು ಅಂದ್ರೆ ನಂಗೊತ್ತಿಲ್ವ, ಮಂಚದ ಕಾಲಿನ ಹಾಗೆ ಮೂರ್ಜನ ಅಂದು ಎರಡು ತೋರ್ಸಿ ಒಂದು ಬರೆದ್ಲಂತೆ.

9.                   ಅಯ್ಯಣ್ಣನ ಕುದುರೆಗೆ ಮೈಯೆಲ್ಲ ಗಾಯ

10.                ಅಲ್ಪನಿಗ್ ಐಶ್ವರ್ಯ ಬಂದ್ರೆ ಮಧ್ಯ ರಾತ್ರಿಲಿ ಕೊಡೆ ಹಿಡಿದ

11.                ಅವ್ರಿವ್ರ್ ಮಾತ್ಕೇಳ್ಬೇಡ ನನ್ಮಾತ್ಕೇಳು, ನಡುಬೀದೀಲ್ನಿಂತ್ಕೊಂಡು ಪುಡಿಮಣ್ಣು ಹುಯ್ಕೊ ಅಂದ್ರಂತೆ

12.                ಅಳೋ ಗಂಡ್ಸನ್ನ ನಗೋ ಹೆಂಗ್ಸನ್ನ ನಂಬ ಬಾರ್ದು

13.                ಆಂಜನೇಯನೇ ಹಗ್ಗ ಕಡೀತಿರ್ಬೇಕಾದ್ರೆ ನಮ್ಗೆಲ್ಲಿಂದ ಶ್ಯಾವಿಗೆ ಕೊಡ್ತಾನೆ!?

14.                ಆಡಿದ್ದೇ ಆಡೋ ಕಿಸಿಬಾಯಿ ದಾಸಯ್ಯ

15.                ಆತುರಗಾರನಿಗೆ ಬುದ್ಧಿ ಮಟ್ಟು

16.                ಆನೆ ಹೊಟ್ಟೆ, ಸೂಜಿ ಗಂಟ್ಳು

17.                ಆರಂಭ ಶೂರತ್ವ

18.                ಆರಕ್ಕೆ ಹತ್ತಲ್ಲ, ಮೂರಕ್ಕೆ ಇಳಿಯಲ್ಲ

19.                ಆಷ್ಟರ ಮಟ್ಟಿಗೆ ಕಂಡ್ರಾ ಕೃಷ್ಣಂಭಟ್ಟ್ರೇ, ಮುಪ್ಪಿನ ಕಾಲಕ್ಕೆ ಮೂರ್ಜನ ಹೆಂಡ್ರು

20.                ಆಳ್ ಮಾಡಿದ್ ಕೆಲ್ಸ ಹಾಳು

21.                ಇದ್ದಿದ್ ಇದ್ದಂಗ್ಹೇಳಿದ್ರೆ ಕೆಂಡ್ದಂತಾ ಕೋಪ

22.                ಇರಳ್ಕಂಡ್ಭಾವೀಲ್ ಹಗಲ್ಬಿದ್ರಂತೆ

23.                ಈಚಲು ಮರದ ಕೆಳಗೆ ನಿಂತು ಮಜ್ಜಿಗೆ ಕುಡ್ದಂಗೆ

24.                ಉಡಕ್ಕಿಲ್ದವಳು ಪಟ್ಟೆ ಸೀರೆ ತೆಗೆದ್ಲಂತೆ

25.                ಉತ್ತರನ ಪೌರುಷ ಒಲೆ ಮುಂದೆ

26.                ಉದ್ದುದ್ದೋರ್ಗ್ ಬುದ್ಧಿ ಇಲ್ಲ

27.                ಊಟಕ್ಕಿಲದ್ ಉಪ್ಪಿನ್ಕಾಯಿ

28.                ಊದೋದು ಕೊಟ್ಟು ಬಾರ್ಸೋದು ತೊಗೊಂಡ್ರಂತೆ

29.                ಊರಿಗೆ ಬಂದವ್ಳು ನೀರಿಗೆ ಬರಲ್ವೆ?

30.                ಊರು ಕೊಳ್ಳೆಹೋದ್ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ

31.                ಎಂಟ್ ವರ್ಷಕ್ ಮಗ ದಂಟು ಅಂದ

32.                ಎಕ್ಕಡನ ರೇಶಿಮೆ ಶಾಲಲ್ಲಿ ಸುತ್ತಿ ಹೊಡೆದ್ರಂತೆ

33.                ಎತ್ತು ಏರಿಗೆಳೀತು ಕೋಣ ನೀರ್ಗೆಳೀತು

34.                ಎದ್ರಾ ಬಾಹ್ಮಣ್ರೆ ಅಂದ್ರೆ ಗುದ್ದಾಟಕ್ಕೆ

35.                ಎಲ್ಲಾರ್ಮನೆ ದೋಸೇನೂ ತೂತೇ

36.                ಏತಿ ಅಂದ್ರೆ ಪ್ರೇತಿ

37.                ಏನೇ ಗಿಡ್ಡಿ ಓಡಾಟ, ಶಾನ್ಭೋಗ್ರ್ ಮನೇಲ್ ಹಬ್ದೂಟ

38.                ಏಲೆ ಎತ್ತೋ ಗುಂಡ ಅಂದ್ರೆ ಉಂಡವ್ರೆಷ್ಟ್ ಮಂದಿ

39.                ಒಂದ್ ಹೊತ್ತುಂಡವ ಯೋಗಿ, ಎರಡ್ ಹೊತ್ತುಂಡವ ಭೋಗಿ, ಮೂರ್ ಹೊತ್ತುಂಡವ ರೋಗಿ, ನಾಕ್ ಹೊತ್ತುಂಡವನ್ ಎತ್ಕೊಂಡ್ ಹೋಗಿ

40.                ಒಲ್ಲದ್ ಗಂಡಂಗ್ ಮೊಸರಲ್ ಕಲ್ಲು

41.                ಓತಿಕ್ಯಾತಕ್ಕೆ ಬೇಲಿ ಸಾಕ್ಷಿ

42.                ಕಂಡವ್ರ್ ಮಕ್ಕಳ್ನ್ ಬಾವೀಗ್ತಳ್ಳಿ ಆಳ‌ನೋಡೋದು

43.                ಕಪ್ಪೇನ ತಕಡೀಲ್ ಹಾಕ್ದಂಗೆ

44.                ಕಳ್ಳನ್ ನಂಬಿದ್ರೂ ಕುಳ್ಳನ್ ನಂಬಾರ್ದು

45.                ಕಳ್ಳನ್ಮನಸ್ಸು ಹುಳ್ಹುಳ್ಗೆ

46.                ಕಾಗೆ ಕಾ ಅನ್ನಕ್ಮುಂಚೆ ಬಡಿದು ಬಾಯಿಗೆ ಹಾಕ್ಕೊಂಡ್ರಂತೆ.

47.                ಕಾಗೆ ವಾಂತಿ ಮಾಡಿದ ಕತೆ

48.                ಕಾರ್ಯವಾಸಿ ಕತ್ತೆಕಾಲ್ಕಟ್ಟು

49.                ಕಾಲು ಸುಟ್ಟ ಬೆಕ್ಕಿನ ತರಹ

50.                ಕಾಸಿಗೆ ಹೋದ ಮಾನ ಆನೆ ಕೊಟ್ರೂ ಬರ್ದು

51.                ಕುಂಬಳ್ಕಾಯ್ ಕಳ್ಳ ಅಂದ್ರೆ ಹೆಗಲ್ ಮುಟ್ ನೋಡ್ಕೊಂಡ್ನಂತೆ

52.                ಕುಂಬಾರಂಗ್ ಒಂದ್ ವರ್ಷ, ದೊಣ್ಣೇಗ್ ಒಂದ್ನಿಮ್ಷ

53.                ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಲಂತೆ

54.                ಕುದುರೆ ಕಂಡ್ರೆ ಕಾಲ್ನೋವು

55.                ಕುಲಗೆಟ್ರೂ ಸುಖವಿಲ್ಲ

56.                ಕೂತು ಉಂಡ್ರೆ ಕುಡ್ಖೆ ಹಣ ಸಾಲ್ದು

57.                ಕೂಸ್ ಹುಟ್ಟಕ್ಮುಂಚೆ ಕುಲಾವಿ ಹೊಲ್ದ್ರಂತೆ

58.                ಕೆಲಸ್ವಿಲ್ಲದ್ಕುಂಬಾರ ಮಗನ್ಕುಂಡೆ ತಟ್ಟಿದ್ನಂತೆ

59.                ಕೆಲಸ್ವಿಲ್ಲದ್ಬಡ್ಗಿ ಮಗನ್ ಕುಂಡೆ ಕೊರೆದ್ನಂತೆ

60.                ಕೈ ಕೆಸರಾದರೆ ಬಾಯ್ ಮೊಸರು

61.                ಕೊಂಕಣ ಸುತ್ತಿ ಮೈಲಾರಕ್ಕೆ

62.                ಕೋಣನ್ಮುಂದೆ ಕಿಂದರಿ ನುಡಿಸ್ದಂಗೆ(ಬಾರಿಸ್ದಂಗೆ)

63.                ಕೋತಿ ತಾನ್ಕೆಡೋದಲ್ದೆ ವನನೆಲ್ಲ ಕೆಡಿಸ್ತಂತೆ

64.                ಕೋತಿ ಮೊಸರನ್ನ ತಿಂದ್ ಹೋತದ್ ಗಡ್ಡಕ್ ಮೆತ್ತಿತಂತೆ

65.                ಕೋತಿ ಹುಣ್ಣು

66.                ಕೋಲು ಮುರಿಬಾರ್ದು, ಹಾವು ಸಾಯ್ಬಾರ್ದು

67.                ಕೋಳೀನ ಕೇಳಿ ಮಸಾಲೆ ಅರಿತಾರಾ?

68.                ಗಂಡ್ ಹೆಂಡ್ರ್ ಜಗಳ್ದಲ್ ಕೂಸ್ ಬಡ್ವಾಯ್ತು

69.                ಗೋಕುಲಾಷ್ಟಮೀಗೂ ಇಮಾಮ್ ಸಾಬ್ರಿಗೂ ಏನ್ ಸಂಬಂಧ?

70.                ಚಾಪೆ ಕೆಳಗ್ ನುಗ್ಗಿದ್ರೆ ರಂಗೋಲೆ ಕೆಳಗ್ ನುಗ್ಗಿದ್ರಂತೆ

71.                ಜಗಲಿ ಹಾರಿ, ಗಗನ ಹಾರಬೇಕು

72.                ಜನ ಮರುಳೋ ಜಾತ್ರೆ ಮರುಳೋ?

73.                ಜಾಣ ಕಿವುಡು

74.                ತಾಯಿಯಂತೆ ಮಗಳು ನೂಲ್ನಂತೆ ಸೀರೆ

75.                ತುಂಬಿದ್ ಕೊಡ ತುಳ್ಕಲ್ಲ

76.                ದಿನಾ ಸಾಯೋವ್ರಿಗ್ ಅಳೋವ್ರ್ಯಾರು

77.                ದುಡ್ಡೇ ದೊಡ್ಡಪ್ಪ

78.                ದುರ್ಭಿಕ್ಷದಲ್ಲಿ ಅಧಿಕಮಾಸ

79.                ದುಷ್ಟ್ರನ್ಕಂಡ್ರೆ ದೂರ ಇರು

80.                ದೂರದ ಬೆಟ್ಟ ಕಣ್ಣಿಗ್ ನುಣ್ಣ್ಗೆ

81.                ದೇವ್ರು ವರ ಕೊಟ್ರೂ ಪೂಜಾರಿ ಕೊಡ

82.                ಧರ್ಮಕ್ ದಟ್ಟಿ ಕೊಟ್ರೆ ಹಿತ್ತಲ್ಗ್ ಹೋಗಿ ಮೊಳ ಹಾಕಿದ್ರಂತೆ

83.                ನವಿಲನ್  ನೋಡಿ ಕೆಂಭೂತ ಗರಿ ಕೆದರ್ಕೊಂಡ್ ಕುಣೀತಂತೆ

84.                ನಾಯಿ ಬೊಗಳಿದ್ರೆ ದೇವ್ಲೋಕ ಹಾಳೆ?

85.                ನಾಯಿ ಹೆಸರು ಸಂಪಿಗೆ

86.                ನಾಯಿಬಾಲ ಡೊಂಕು

87.                ನಾಯೀಗ್ಯಾಕ್ ಶ್ಯಾಮಿಗೆ (ಶ್ಯಾವಿಗೆ) ಪಾಯ್ಸ್

88.                ಪಾಪಿ ಸಮುದ್ರಕ್ ಹೋದ್ರೂ ಮೊಣಕಾಲುದ್ದ ನೀರು

89.                ಪ್ರಾಣ ಹೋದ್ರೂ ಪರ್ವಾಗಿಲ್ಲ ಪ್ರಾಸ ಹೋಗ್ಲಿಲ್ಲ ಅಂದ್ನಂತೆ

90.                ಬಾಣ್ಲೆ ಇಂದ ಬೆಂಕೀಗ್ ಬಿದ್ದಂಗ್ ಆಯ್ತು

91.                ಬಾಯ್ಬಿಟ್ರ್ ಬಣ್ಣ್ಗೇಡು

92.                ಬಿಸಿತುಪ್ಪ, ನುಂಗೋಹಾಗಿಲ್ಲ ಉಗ್ಯೋಹಾಗಿಲ್ಲ

93.                ಬೀದೀಲ್ಹೋಗೋ ಮಾರಿ ಮನೇಗ್ಬ್ಂದ್ ಹೋಗವ್ವ

94.                ಬೀಸೋ ದೊಣ್ಣೆ ತಪ್ಪಿದ್ರೆ ನೂರ್ ವರ್ಷ ಆಯಸ್ಸು

95.                ಬೂದಿಮುಚ್ಚಿದ ಕೆಂಡ

96.                ಬೆಕ್ಕಿಗೆ ಚೆಲ್ಲಾಟ ಇಲೀಗೆ ಪ್ರಾಣ್ಸಂಕ್ಟ

97.                ಬೆಳೆಯುವ ಮರ ಮೊಳಕೆಯಲ್ಲಿ

98.                ಮಂಗನ ಕೈಲಿ ಮಾಣಿಕ್ಯ ಕೊಟ್ಟಂಗೆ

99.                ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೇ ನನ್ಹೆಂಡ್ತಿ ಅಂದ್ನಂತೆ

100.             ಮದ್ವೆ ಆಗೋತನಕ ಹುಚ್ ಬಿಡ್ದು, ಹುಚ್ ಬಿಡೋತನಕ ಮದ್ವೆ ಆಗ್ದು

101.             ಮನೆಗೆ ಮಾರಿ ಪರರಿಗೆ ಉಪಕಾರಿ

102.             ಮನೇಲ್ಹುಲಿ ಹೊರಗಿಲಿ

103.             ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ

104.             ಮೌನಂ ಸಮ್ಮತಿ ಲಕ್ಷಣಂ

105.             ಯಥಾ ರಾಜ ತಥಾ ಪ್ರಜಾ

106.             ಯಾರ್ದೋ ಸೀರೆ ಎಲ್ಲವ್ವನ್ ಜಾತ್ರೆ

107.             ಯಾವ ಹುತ್ತದಲ್ಲಿ ಯಾವ ಹಾವೋ

108.             ರಾತ್ರಿಯೆಲ್ಲ ರಾಮಾಯ್ಣ ಕೇಳಿ ರಾಮಂಗೂ ಸೀತೆಗೂ ಏನ್ಸಂಬಂಧ ಅಂದ್ರಂತೆ

109.             ರಾಮೇಶ್ವರಕ್ ಹೋದ್ರೂ ಶನೇಶ್ವರಕಾಟ ಬಿಡ್ದು

110.             ರಾವಣನ್ ಹೊಟ್ಟೇಗ್ ಅರ್ಕಾಸು ಮಜ್ಜಿಗೆ

111.             ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು

112.             ರೋಗಿ ಬಯ್ಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೆ

113.             ವಿನಾಶಕಾಲೇ ವಿಪರೀತ ಬುದ್ಧಿಹಿ

114.             ವೇದ ಸುಳ್ಳಾದ್ರೂ ಗಾದೆ ಸುಳ್ಳಾಗ್ದು

115.             ವೇದಾಂತ ಅಂಬಲಿಕ್ಕೆ, ಬದನೆಕಾಯಿ ತಿಂಬ್ಲಿಕ್ಕೆ

116.             ಶುಭಸ್ಯ ಶೀಘ್ರಂ

117.             ಸನ್ಯಾಸಿ ಸಂಸಾರ

118.             ಸರ್ವ ಚಿತ್ತಾರ ಮಶಿ ನುಂಗಿತು

119.             ಸಾರ್ಸಿದ್ ಮನೇಲ್ ಬೋಳಪ್ ಹೇತ

120.             ಸ್ವತಃ ಬುದ್ಧಿ ಇಲ್ಲ, ಬೇರೇವ್ರು ಹೇಳಿದ್ರೆ ಕೇಳಲ್ಲ

121.             ಹಂಸಕ್ಷೀರ ನ್ಯಾಯ

122.             ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ

123.             ಹಳೇ ಗಂಡನ್ ಪಾದವೇ ಗತಿ

124.             ಹಾಗಾಲ್ಕಾಯ್ಗೆ ಬೇವಿನ್ಕಾಯ್ ಸಾಕ್ಷಿ

125.             ಹಾಸಿಗೆ ಇದ್ದಷ್ಟು ಕಾಲು ಚಾಚು

126.             ಹಿತ್ತಲ ಗಿಡ ಮದ್ದಲ್ಲ

127.             ಹುಚ್ಮುಂಡೆ ಮದುವೇಲ್ ಉಂಡವ್ನೇಜಾಣ

128.             ಹೆಂಡತಿ ದಾಕ್ಷಿಣ್ಯಕ್ಕೆ ಸಿಂಬಳ್ಬುರುಕ ಭಾವ್ಮೈದ್ನನ್ ಎಂಜ್ಲ್ ತಿಂದ್ನಂತೆ

129.             ಹೆತ್ತವರಿಗ್ ಹೆಗ್ಣ ಮುದ್ದು

130.             ಹೊಟ್ಟೇಗ್ ಹಿಟ್ಟಿಲ್ಲ ಜುಟ್ಟಿಗ್ ಮಲ್ಲಿಗೆ ಹೂವು

131.             ಹೊಸ ವೈದಂಗಿತ ಹಳೆ ರೋಗಿ ಮೇಲು

132.             ಹೊಸ್ನೀರ್ ಬಂದು ಹಳೇ ನೀರ್ ಕೊಚ್ಕೊಂಡ್ ಹೋಯ್ತು

133.             ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಇಂದ