Wednesday, May 17, 2017

ಮೇಷ್ಟ್ರು ಮತ್ತು ಪವಾಡ



೧೯೫೦ರ ದಶಕದ ಕೊನೆಯ ವರ್ಷಗಳಲ್ಲಿನ ಶಿವಮೊಗ್ಗೆ. ಇಲ್ಲಿಯ ಸರ್ಕಾರಿ ನೌಕರರ ವಸತಿಯ ಸಾಲುಮನೆಗಳಲ್ಲಿನ ಒಂದು ಮನೆಯಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿನ ಅಧ್ಯಾಪಕರೊಬ್ಬರು ಅವರ ಕುಟುಂಬದ್ದೊಂದಿಗೆ ವಾಸವಿದ್ದರು. ಅಲ್ಲಿನ ಇತರ ಮನೆಗಳಿಗಿಂತ ದೊಡ್ಡದಾಗಿದ್ದ ಆರು ಮನೆಗಳಲ್ಲೊಂದರಲ್ಲಿ ಅವರ ವಾಸ. ಅವರ ಮೇಲೆ ಅಲ್ಲಿನ ಜನರಿಗೆ ಬಹಳ ಮರ್ಯಾದೆ, ಗೌರವಗಳಿದ್ದವು. ಎಲ್ಲರೂ ಅವರನ್ನು ’ಮೇಷ್ಟ್ರು’ ಎಂದೇ ಗುರುತಿಸುತ್ತಿದ್ದರು. 

ಮೇಷ್ಟ್ರು ಸ್ವತಃ ನಾಸ್ತಿಕರಾದರೂ, ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ  ತಿಳಿದಿರಬೇಕೆಂಬ ಉದ್ದೇಶದಿಂದ ಕೆಲವು ಹಬ್ಬಗಳನ್ನು ಮನೆಯಲ್ಲಿ ಆಚರಿಸುತ್ತಿದ್ದರು. ಹಬ್ಬದ ಪೂಜೆ ಪುನಸ್ಕಾರಗಳಿಗಿಂತ ಊಟಕ್ಕೇ ಪ್ರಾಧಾನ್ಯವಿತ್ತು ಎಂದರೂ ತಪ್ಪಿಲ್ಲವೆನ್ನಿ. ಅಂತಹ ಹಬ್ಬಗಳಲ್ಲಿ ಗಣೇಶನ ಹಬ್ಬವೂ ಒಂದು. ಆ ವಸತಿಗಳಲ್ಲಿ ಇರುತ್ತಿದ್ದ ಜೋಯಿಸ್‍ ಎಂಬಾತ ಮೇಷ್ಟರ ಮನೆಯಲ್ಲಿ ಹಬ್ಬದ ಪೂಜೆ ಮಾಡಿಸುವ ಜವಾಬ್ದಾರಿಯನ್ನು ತಾವೇ ಹೊತ್ತು, ಹಬ್ಬದ ದಿನ ಮೊದಲ ಪೂಜೆ ಮೇಷ್ಟರ ಮನೆಯಲ್ಲಿ ಮಾಡಿಸಿದ ನಂತರ ಇತರ ಮನೆಗಳಲ್ಲಿ ಪೂಜೆ ಮಾಡಿಸುವ ಪರಿಪಾಠವಿಟ್ಟುಕೊಂಡಿದ್ದರು.

ಹಬ್ಬದ ದಿನ ಹತ್ತಾರು ಗುಂಪುಗಳಲ್ಲಿ ಹುಡುಗರು ಬಂದು, ಗಣಪತಿಯ ದರ್ಶನ ಮಾಡಿ ಜೈಕಾರ ಹಾಕಿ ಹೋಗುತ್ತಿದ್ದರು. ಎಲ್ಲ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬದ ನಂತರದ ಒಂದು ದಿನವನ್ನು ಆ ಜೋಯಿಸರೇ ನಿರ್ಧರಿಸಿ, ಮೇಷ್ಟರ ಕೈಯಿಂದ ಗಣಪತಿಯ ವಿಸರ್ಜನೆಯನ್ನೂ ಮಾಡಿಸುತ್ತಿದ್ದರು. ಆ ವಸತಿಗಳಲ್ಲಿ ವಾಸವಿದ್ದ ಕೆಲವರು, ಅವರ ಮನೆಯಲ್ಲಿನ ಮಕ್ಕಳು, ಮೇಷ್ಟರ ಸ್ನೇಹಿತರು, ಬಂಧುಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಹತ್ತಿರದಲ್ಲೇ ಇದ್ದ ಒಂದು ಭಾವಿಯಲ್ಲಿ ಗಣಪತಿಯ ವಿಸರ್ಜನೆಯಾಗುತ್ತಿತ್ತು. ಮೇಷ್ಟರು ತಟ್ಟೆಯಲ್ಲಿ ಗಣಪತಿಯ ವಿಗ್ರಹವನ್ನಿಟ್ಟುಕೊಂಡು ಹೊರಟಾಗ ಇತರರು ಅವರ ಹಿಂದೆ ಭಾವಿಗೆ ಸಾಗುತ್ತಿದ್ದರು.

ಒಂದು ಬಾರಿ ಗಣೇಶನ ವಿಸರ್ಜನೆಯಲ್ಲಿ ಒಂದು ಘಟನೆ ನಡೆಯಿತು. ಆ ಬಾರಿ, ಗಣಪತಿಯ ವಿಗ್ರಹದ ಕಿರೀಟದ ಮೇಲೆ, ತುತ್ತ ತುದಿಯಲ್ಲಿ, ಒಂದು ಸುಂದರ ರೋಜಾ ಹೂವನ್ನು ಸಿಕ್ಕಿಸಿ ಅಲಂಕಾರ ಮಾಡಿದ್ದರು ಮೇಷ್ಟರ ಪತ್ನಿ ಶಾಂತಮ್ಮನವರು. ಮೇಷ್ಟ್ರು ಭಾವಿಯನ್ನು ತಲುಪಿದಂತೆಯೇ, ಜೋಯಿಸರು ಗಣಪತಿಗೆ ಮಂಗಳಾರತಿ ಮಾಡಿದರು. ಮೇಷ್ಟ್ರು ಗಣಪನ ವಿಗ್ರಹವನ್ನು ಅದನ್ನಿಟ್ಟಿದ್ದ ತಟ್ಟೆಯಿಂದ ಹೊರತೆಗೆದು, ಭಾವಿಯ ಕಟ್ಟೆಗೆ ಒರಗಿ ನಿಂತು ವಿಗ್ರಹವು ಭಾವಿಯ ಬಾಯಿಯ ಮಧ್ಯಕ್ಕೆ ಇರುವಂತೆ ಎರಡೂ ಕೈಚಾಚಿ ನಿಂತರು. ಜೋಯಿಸರು ಇನ್ನಷ್ಟು ಮಂತ್ರಗಳನ್ನು ಹೇಳಿ, "ಇನ್ನು ಬಿಡಿ" ಅಂದರು. ಮೇಷ್ಟ್ರು ವಿಗ್ರಹವನ್ನು ಬಿಟ್ಟರು. ಅದು ನೇರವಾಗಿ ಬಿತ್ತು. ಬಿದ್ದ ಶಬ್ದ ಕೇಳಿಸಿತು. 

ಮೇಷ್ಟರ ಕೈ ಇನ್ನೂ ಅಲ್ಲೇ ಇತ್ತು. ಎಲ್ಲರೂ ನೋಡುತ್ತಿದ್ದಂತೆ, ವಿಗ್ರಹದ ಮೇಲೆ ಸಿಕ್ಕಿಸಿದ್ದ ಕೆಂಪು ರೋಜಾ ಹೂವು  ಭಾವಿಯ ಆಳದಿಂದ ನೆಟ್ಟಗೆ ಮೇಲಕ್ಕೆ ಬಂತು. ಮಂಗಳಾರತಿಯ ಮಂದ ಬೆಳಕಿನಲ್ಲೂ ಅದು ಮೇಷ್ಟರಿಗೆ ಕಂಡು ಅವರು ಅದನ್ನು ಹಿಡಿದುಕೊಂಡರು. ನೆರೆದಿದ್ದ ಜನರೆಲ್ಲ ಆಶ್ಚರ್ಯದಿಂದ ಪುಳಕಿತರಾಗಿ ಅದು ಒಂದು ಪವಾಡವೇ ಎಂದು ಭಾವಿಸಿದರು! ಜೋಯಿಸರಂತೂ ಅತ್ಯಂತ ಭಯ ಭಕ್ತಿಗಳಿಂದ, "ಇದು ಆ ಗಣೇಶನ ಅನುಗ್ರಹ! ಪ್ರಸಾದ!! ಇದನ್ನು ಶಾಂತಮ್ಮನವರೇ ಮುಡಿದುಕೊಳ್ಳಬೇಕು ಎಂದು ತಾಕೀತು ಮಾಡಿದರು. ಮೇಷ್ಟರಿಗೆ ನಗು. ಸರಿ, ಜೋಯಿಸರು ಹೇಳಿದಂತೆಯೇ ಶಾಂತಮ್ಮನವರು, ಅದನ್ನು ತಮ್ಮ ಕೊಂಡೆಗೆ ಮುಡಿದುಕೊಂಡರು. ಅಲ್ಲಿ ನೆರೆದಿದ್ದವರೆಲ್ಲ ಅದೇ ವಿಷಯವನ್ನು ವಿಸ್ಮಯದಿಂದ ಮಾತಾಡಿಕೊಳ್ಳುತ್ತಾ ಹಿಂದಿರುಗಿದರು. 

ಮಾರನೆಯ ಮುಂಜಾನೆ ಕಂಡ ದೃಷ್ಯ ಹೀಗಿತ್ತು: ಹಿಂದಿನ ರಾತ್ರಿಯ ಘಟನೆಯನ್ನು ಕೇಳಿ, ಅದು ಪವಾಡವೆಂದು ನಂಬಿ, ಅದರ ಬಗ್ಗೆ ಮೇಷ್ಟರನ್ನು ಅಭಿನಂದಿಸಲು ಯಾರೋ ಬಂದಿದ್ದರು.  ಅದು ಪವಾ್ಡವಲ್ಲ, ಅದಕ್ಕೆ ಸಾಧಾರಣ ಭೌತಿಕ ಕಾರಣಗಳಿದ್ದು,  ಪ್ರಾಥಮಿಕ ಭೌತಶಾಸ್ತ್ರದ ಸಹಾಯದಿಂದ ಅದನ್ನು ವಿವರಿಸಬಹುದು.  ವಿಗ್ರಹವು ನೀರನ್ನು ಭೇದಿಸಿ ವೇಗವಾಗಿ ಒಳಹೋದಮೇಲೆ ಸುತ್ತಲಿನ ನೀರು ವಿಗ್ರಹವು ತೆರವು ಮಾಡಿದ ಜಾಗವನ್ನು ಮತ್ತೆ ತುಂಬಲು ಹೇಗೆ ರಭಸವಾಗಿ ನುಗ್ಗಿರಬೇಕು. ವಿಗ್ರಹದ ತುದಿಯಲ್ಲಿದ್ದ ಹಗುರವಾದ ಹೂವನ್ನು ಒಳನುಗ್ಗುವ ನೀರು ಹೇಗೆ ತಳ್ಳಿರಬೇಕು. ಅದು ಹೂವು ನೆಟ್ಟಗೆ ಮೇಲೆ ಬರುವಂತೆ ಹೇಗೆ ಮಾಡಿರಬೇಕು. ಇದು ಪವಾಡವಲ್ಲ, ಕೇವಲ ಅಸಾಮಾನ್ಯ ಆಕಸ್ಮಿಕ ಘಟನೆ, ಎಂಬ ವಿವರಣೆ ಮೇಷ್ಟರಿಂದ ನಡೆಯುತ್ತಿತ್ತು.

Monday, April 25, 2016

ಕ್ರೌರ್ಯ




                           

                          ಮೂರುರಸ್ತೆಗಳು ಸೇರುವೆಡೆ 
                          ಮೂಢನಂಬಿಕೆಯಿಂದೊಡೆದ
                          ಮೊಟ್ಟೆಗಳು  ಉಣಲಿರದೆಷ್ಟುಹಸುಳೆ
                          ಜೀವಗಳನ್ನುಳಿಸೀತೆಂದು ನೊಂದನೋಮಾರ









Monday, February 8, 2016

ಪೊರೆಯ ತೊರೆ!







ಬೇಸಿಗೆಯ ಬೇಗೆಯಲಿ ಮುಂಗಾರಿನ ಸೋನೆಯೇ ಸೈ ಎಂದಂತೆ,  
ಬೇಲಿಯಾಚೆ ಬೆಳೆದ ಹುಲ್ಲೆಷ್ಟು ಹಸಿರು ಎಂದು ಹಾತೊರೆದಂತೆ,
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳೀಯುಗದ ಸೊಬಗು ಸೋಜಿಗಗಳ ಬದಿಗೊತ್ತಿ,
ಅಳಿದ, ಹಿಂದುಳಿದ ಹಿಂದಿನದಕ್ಕೆ ಹಾತೊರೆಯದಿರೆಂದ ಓಮಾರ.




Thursday, January 21, 2016

ಮುದ



ಛಳಿಗಾಲದ ಬರಡು ಹವೆಯಿಂದ ಬೇಸತ್ತ ಮೈಮನಸಿಗೆ
ಅನಿರೀಕ್ಷಿತ ಮಳೆಯು ತಂದಿತ್ತು, ಮುದ ತರುವ, ನವಿರು
ರೇಶೀಮೆಯಂದದ, ತೇವಭರಿತ, ಬದುಕು ಬಯಸುವ, ಛಳಿಯ
ತೆರೆದ ತೋಳುಗಳಿಂ ಸ್ವಾಗತಿಸುವಂದದ ಕುಳಿರ್ಗಾಳಿ!




Wednesday, November 12, 2014

Rubaiyat of Omar Khayam - XL





ಗೊತ್ತುಂಟೆ ನಾನೆಂತ ಮೋಜಿನಲಿ 
ಎರಡನೆಯ ಮದುವೆಯಾದೆ?
ಬರಡು ತರ್ಕವ ಬಡಿದೋಡಿಸಿ
ಲತೆಯ ಕುವರಿಯ  ಕೈಪಿಡಿದೆ


ಒಮರ್ ಖಯಾಮನ ಒಂದು ಪದ್ಯದ ಭಾವಾನುವಾದ

Friday, October 3, 2014

ಹೀಗೊಂದು ಪ್ರಶಸ್ತಿಪ್ರದಾನ ಸಮಾರಂಭ



ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ  ಇಂದು (೧೨-೦೯-೨೦೧೪) ವಿವಿಧ ದತ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 

ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸುಮಾರು ಹದಿನೈದು ಇಪ್ಪತ್ತು ಲೇಖಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. 

ಬೆಳಿಗ್ಗೆ ೧೧ ಘಂಟೆಗೆ ಪ್ರಾರಂಭವಾಗಬೇಕಿದ್ದ ಸಮಾರಂಭ ೧೧:೩೦ ಕ್ಕೆ ಪ್ರಾರಂಭವಾಯಿತು. ನಾಡಗೀತೆಯನ್ನು ಹಾಡಲು ಪ್ರಾರಂಭಿಸಿದಾಗ ಅಧ್ಯಕ್ಷರು ಎಲ್ಲರೂ ಎದ್ದು ನಿಲ್ಲುವಂತೆ ಕೈಸನ್ನೆಯ ಮೂಲಕ, ಶಾಲಾ ಮಕ್ಕಳಿಗೆ ಹೇಳುವಂತೆ ಹೇಳಿದರು. 

ಮೂರು, ನಾಲ್ಕುಪ್ರಶಸ್ತಿವಿಜೇತರನ್ನು  ಒಟ್ಟಿಗೆ ಕರೆದು, ವೇದಿಕೆಯ ಮೇಲೆ ಕೂಡಿಸಿ ಸನ್ಮಾನಿಸಲಾಯಿತು. ಸನ್ಮಾನಿತರು ಯಾರಿಗೂ ಕಾಣಬಾರದೆಂಬಂತೆ ಛಾಯಾಚಿತ್ರಕಗಾರರು  ಅಡ್ಡ ಗೋಡೆಯಂತೆ ನೆರೆದಿದ್ದರು. 

ಸಮಾರಂಭಕ್ಕೆ ಬರಲು ಸಾಧ್ಯವಾಗದೆ ಇದ್ದ ಪ್ರಶಸ್ತಿವಿಜೇತರಿಗೆ, "ಯಾರನ್ನಾದರೂ ಕಳಿಸಿಕೊಡಿ" ಎಂದು ಹೇಳಿದ್ದ ವ್ಯವಸ್ಥಾಪಕರು, ಧ್ವನಿವರ್ಧಕದಲ್ಲಿ  ".... ಅವರ ಮಗಳು ಬಂದಿದ್ದಾರೆ. ನೀವು ಹಿಂದೆ ಹೋಗಿ ತೆಗೆದುಕೊಂಡು ಬಿಡಿ ಎಂದು ಉದಾಸೀನತೆಯಿಂದ ಎಂಬಂತೆ ಹೇಳಿದರು". ಇದೂ ಸಾಲದಂತೆ "ಅಚಾತುರ್ಯದಿಂದ ನಾನು ಯಾರದಾದರೂ ಹೆಸರನ್ನು ಬಿಟ್ಟಿದ್ದರೆ, ದಯವಿಟ್ಟು ಕೈ ಎತ್ತಿ ಎಂದು ಹೇಳಿದರು. ಲೇಖಕರನ್ನು ಅಮಂತ್ರಿಸಿದ್ದು ತಾವೇ ಎಂಬುದನ್ನು ವ್ಯವಸ್ಥಾಪಕರು ಮರೆತಂತಿತ್ತು. ಹೆಸರು ಮಾತ್ರದಿಂದ ವಿಜೇತರನ್ನು ವೇದಿಕೆಗೆ ಕರೆಯುತ್ತಿದ್ದರು. ಸಮಾರಂಭಕ್ಕೆ ಬಂದಿದ್ದ ಹಿರಿಯರೊಬ್ಬರು, "ಯಾವ ದತ್ತಿ, ಯಾವ ಪುಸ್ತಕ ಅಂತ ಹೇಳ್ರೀ" ಎಂದು ಕೂಗಿದರು. ಆ ನಂತರ ದತ್ತಿ, ಪುಸ್ತಕದ ಹೆಸರುಗಳನ್ನೂ ಹೇಳಿ ಪುರಸ್ಕೃತರನ್ನು ವೇದಿಕೆಗೆ ಕರೆಯಲಾಯಿತು. 

ಪುರಸ್ಕೃತರನ್ನು ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು, ಅವರಬಗ್ಗೆ, ಅವರ ಪುಸ್ತಕದ ಬಗ್ಗೆ, ನಾಲ್ಕೇ ನಾಲ್ಕು ಮಾತುಗಳನ್ನು ಹೇಳಿ ಪ್ರಶಸ್ತಿ ಪ್ರದಾನ ಮಾಡಿದ್ದಿದ್ದರೆ ಕೇವಲ ೩೦ ನಿಮಿಷಗಳಲ್ಲಿ ಮುಗಿದ ಈ ಕಾರ್ಯಕ್ರಮ, ೬೦ ನಿಮಿಷಗಳಲ್ಲಿ ಮುಗಿಯುತ್ತಿತ್ತು ಅಷ್ಟೆ. ವ್ಯವಸ್ಥಾಪಕರಿಗೆ ಇಷ್ಟೂ ಸಮಯ, ಸಂಯಮ ಇರಲಿಲ್ಲವೇ?

ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಷ್ಟು ಅಸಂಸ್ಕೃತ, ಬೇಜವಾಬುದಾರಿತನದ ಕಾರ್ಯಕ್ರಮ ನಡೆಯಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ. 

ಗಾಯದಮೇಲೆ   ಉಪ್ಪು ಸವರಿದಂತೆ, ಒಂದು ಲಕೋಟೆಯಲ್ಲಿ ನಗದು ಹಣವನ್ನೂ ಕೊಟ್ಟರು. ಲಕೋಟೆಯ ಮೇಲೆ ವಿವಿಧ ಲೆಕ್ಕಗಳನ್ನು ಬರೆದು, ಅವನ್ನು ಹೊಡೆದುಹಾಕಿ, "ಬಹುಮಾನ, ೫೦೦ ರೂ" ಎಂದು ಬರೆಯಲಾಗಿತ್ತು. ಇದು ಪ್ರಶಸ್ತಿಯ ಮೊಬಲಗನ್ನು ಕೊಡುವ ರೀತಿಯೆ? ನೋಂದಾಯಿಸಿಲ್ಪಟ್ಟ ಸಂಸ್ಥೆಗಳು ಚೆಕ್ ಮೂಲಕ ಹಣ ನೀಡುವುದು ನಿಯಮವಲ್ಲವೆ? ಅಲ್ಲದೆ, ಇದು ಬಹುಮಾನವೋ ಪ್ರಶಸ್ತಿಯೋ?

ಇದು ಪ್ರಶಸ್ತಿಪ್ರದಾನ ಮಾಡುವ ರೀತಿಯೆ? ಇವೆಲ್ಲವೂ ಪ್ರಶಸ್ತಿವಿಜೇತರನ್ನು ಅವಮಾನಿಸಿದಂತಾಗಲಿಲ್ಲವೆ?

ಹಿಂದೆ ನಾವು ಪರಿಷತ್ತಿನಲ್ಲಿ ಕಂಡಂತಹ ಸಮಾರಂಭಗಳ ವೈಭವಯುತ ಚಿತ್ರ ಒಮ್ಮೆ ಕಣ್ಣಿನ ಮುಂದೆ ಹಾದುಹೋಗಿ, ಸಾಹಿತ್ಯ ಪರಿಷತ್ತಿನ ಇಂದಿನ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಮನಸ್ಸಿಗೆ ಬಹಳ ನೋವಾಯಿತು. 


ಪ್ರಶಸ್ತಿ ವಿಜೇತರೊಬ್ಬರ ಮಗಳು ಹಾಗೂ ಮಗ. 


ವಿದ್ಯ ಶಂಕರ್ 
ಜೆ ಎಲ್ ಅನಿಲ್ ಕುಮಾರ್ 

Monday, September 16, 2013

ಸ್ವಾಮಿ




       ಗಡ್ಡ-ಮೀಸೆಗಳು, ತಲೆಗೂದಲೇ ಅಳತೆಯಾದರೆ
       ನೀನೊಬ್ಬ ಮಂದಮತಿಯೇ ಸರಿ.

       ಕಾವಿಚಾಟಿ, ನಾಮ, ಮುದ್ರೆ, ವಿಭೂತಿಗಳಾದರೆ
       ನೀನೊಬ್ಬ ಅಜ್ಞಾನಿಯಯೇ ಸರಿ. 

      ಕಣ್ಣರೆತೆರೆದು, ಅರ್ಥವಿರದ ಪದಗಳ ಹೆಣೆದು
      ಮಂಕುಮಾಡಲಾರದ ನೀ ಹುಂಬನೇ ಸರಿ.

      ಕಾಸಿಸಿದು ಪ್ರತಿನೀಡದ ಒಂದೇ ವ್ಯಾಪಾರದಿ 
      ತೊಡಗಲಾರದ ನೀ ಬಡವನೇ ಸರಿ

      ಚಿಂತಿಲ್ಲ! ಕಪಟಿಗಳನೆಲ್ಲ ಸಂದೇಹದಿ 
      ನೋಡುವ ನೀ ಬುದ್ಧನೇ ಸರಿಯೆಂದ ಓಮಾರ.


if you can not read the text above, please click on the image below



Friday, July 19, 2013

ಶಾಪ









ಅರ್ಥವಾಗದಿದ್ದರೂ ಹಳೆಗನ್ನಡವನೋದಿ ಆನಂದಿಸಿದ ತಪ್ಪಿಗೆ
ಕೈಲಾದಮಟ್ಟಿಗೆ ಕನ್ನಡವ ಓದಿ ಬರೆದ ತಪ್ಪಿಗೆ
ಬಲವಂತ ಮಾಘಸ್ನಾನವೆಂಬಂತೆ ದಿನವೂ ಬಸ್ಸಿನಲ್ಲಿ ಕನ್ನಡ ಸಿನಿಮಾ ಸಂಗೀತವ ಕೇಳುವಂತೆ ಶಾಪ ಕೊಟ್ಟನೇನೋ ಆ ಕ್ರೂರಿ! 



Sunday, May 27, 2012

ಕಾಲದುಂಗುರ




ಸಣ್ಣ ಟಣ್‍ಕಾರ,
ಕ್ಷಣಿಕ ಹೊಳಪಿನ
ಹೊರತು
ಜಾರಿತ್ತು
ನನ್ನುಂಗುರ
ನನಗರಿಯದೆಂಬಂತೆ

ತೇಜೋಮಯಿ
 ಶಕುಂತಲೆಯು
ಒನಪಿನಿಂದ
ಬೆಳ್ಳಿ ಕಿರುದೆರೆಗೆ
ಕೈಚಾಚಿದ ಚಿತ್ರವು
ಚಿಮ್ಮಿತ್ತು ಮನದಲ್ಲಿ

ತವರಿನ ತವಕದಲಿ
ಲೀನಳಾಗಿದ್ದಳೋ,
ಕೆಳಗಿದ್ದ
ಚಂಚಲ ಕನ್ನಡಿಯು ಬಿಂಬಿಸಿದ
ಸುಭದ್ರ ಭವಿಷ್ಯದಲಿ
ತಲ್ಲೀನಳಾಗಿದ್ದಳೋ?

ಅಭಯದುಂಗುರ
ಕಳಚಿ
ಆರ್ತ ಪ್ರಾರ್ಥನೆಗಿಂತ
ಆಳಕ್ಕೆ ಮುಳುಗಿತ್ತು.
ಇಚ್ಛಾಸ್ಮರಣಿ
ಬಲಶಾಲಿಗೆ
ಆಕರ್ಷಿತ ಹೆಣ್ಣು-ಮಗುವಿನ
ದುಬಾರಿ ತಪ್ಪು ಅದು.

ಭಂಗಾರ ಗರ್ಭದ
ಪಾಪದ ಮೀನು
ತೇಲಿ ಬಂದು,
ಹಸಿದ ಕೈಗಳಿಂದ
ಸಿಗಿದು ಸೀಳಾಗಿರದಿದ್ದರೆ
ಅದೆಂತಃ ಅಂತ
ಕಾದಿತ್ತೋ ಆಕೆಗೆ?


ಆ ಶಪಿತ ರಾಜನ
ಗೋಜೇ ಇಲ್ಲದಿರೆ
ಅವಳ ಬಾಳು
ಹಸನಾಗಿದ್ದಿದ್ದೀತೆ,
ತನ್ನ ತಪ್ಪಿಗೆ
ಹಳಿಯುವ ತವರಿಗೆ
ಹಿಂಬಂದರೂ ಸೈ?

ಕಣ್ಣಿಗೆ ಎಟಕುವುದೆಲ್ಲವ
ಗೆದ್ದು ತನ್ನದೆಂದ
ಅವಳ ಕೋಲ್ಮಿಂಚು ಮಗನ
ನಾಡಾದ ಈ
ಭಾರತ
ಪ್ರಜೆಗಳಾಗಿರುತ್ತಿರಲಿಲ್ಲವೇನೊ
ನಾವು ಆಗ.


ಬಲಿಷ್ಠ ಅತಿಕ್ರಮಿಗಳ
ಕತ್ತಿಗಳಡಿ
ಕುಗ್ಗುತ್ತಿರಲಿಲ್ಲವೇನೊ
ನಾವಾಗ;
ನಿಜಗಳನು
ಮನಸ್ಸೇಚ್ಛೆ ನಿರ್ಧರಿಸಿಬಿಡುವ
ಶಕ್ತಿವಂತರು ನಿರ್ಮಿಸಿದ
ಚರಿತ್ರೆಗಳನ್ನು

ಧಿಕ್ಕರಿಸಿಬಿಡುತ್ತಿದ್ದೆವಾನೋ...




If you cannot read the above, 

please click on the pictures below to see larger.



Sunday, November 13, 2011

…… ರೆ




ಸುತ್ತೆಲ್ಲ ಮಂದಿ ಮತಿಹೀನರಾಗುತ್ತ ಅದರ ತಪ್ಪ
ನಿನ್ನಮೇಲೆ ಹೇರಿದೊಡೆಯೂ, ಮತಿ ನಿನ್ನ ವಶದಲ್ಲಿರೆ;
ಜಗದ ಅವಿಶ್ವಾಸದೆದುರು ನೀ ವಿಶ್ವಾಸಹೀನನಾಗದಿರೆ,
ಆ ಅವಿಶ್ವಾಸಕ್ಕೆ ತಾಳ್ಮೆದೋರಬಲ್ಲೆಯಾದರೆ;
ಕಾಯಬಲ್ಲವನಾಗಿ, ಕಾದು ದಣಿಯಲೊಲ್ಲೆಯಾದರೆ,
ನಿನ್ನ ಬಗ್ಗೆ ಸುಳ್ಳುಗಳ ಹೇಳಿದರೂ ಸುಳ್ಳಾಡವೊಲ್ಲೆಯಾದರೆ,
ದ್ವೇಶಿಸಲ್ಪಟ್ಟರೂ ದ್ವೇಶಕ್ಕೆ ನೀ ಎಡೆಗೊಡದಿದ್ದರೆ,
ಇಷ್ಟಾಗಿ, ನೀ ಮೆರೆಯದಿರೆ, ಬಲ್ಲವನಂತೆ ಮಾತನಾಡದಿರೆ;

ಕನಸ ಕಾಣಬಲ್ಲವನಾಗಿಯೂ ಕನಸು ನಿನ್ನ ಯಜಮಾನನಾಗದಿರೆ;
ಆಲೋಚನಾಪರನಾಗಿ, ಆಲೋಚನೆಗಳೇ ನಿನ್ನ ಗುರಿಯಾಗದಿರೆ;
ವಿಜಯ ವಿಪತ್ತುಗಳನ್ನು ಎದುರಿಸಿ
ಅವೆರಡೂ ವಂಚಕರು ಒಬ್ಬನೇ ಎಂಬಂತೆ ನೀ ಕಂಡರೆ;
ನೀನುಲಿದ ಸತ್ಯಗಳ ತಿರುಚಿ, ನೀಚರು
ಮರುಳರಿಗೆ ಉರುಳುಮಾಡುವುದ ನೀ ಸಹಿಸಬಲ್ಲೆಯಾದರೆ,
ನೀ ಜೀವ ತೇಯ್ದು ಕಟ್ಟಿದ್ದು ಮುರಿದುಬಿದ್ದುದ ನೋಡಿ
ಮತ್ತೆ ಕಟ್ಟಲು ಸವಕಲು ಸಾಧನಗಳನೆತ್ತ ಬಲ್ಲೆಯಾದರೆ;

ನೀನು ಗೆದ್ದುದನೆಲ್ಲ ಗುಡ್ಡೆಹಾಕಿ
ದಾಳದ ಕುಣಿತಕ್ಕೆ ಪಣವೊಡ್ಡಿ,
ಸೋತು, ಮತ್ತೆ ಮೂಲದಿಂದ ಪ್ರಾರಂಭಿಸಿ
ನಿನ್ನ ಸೋಲಿನ ಬಗ್ಗೆ ಸೊಲ್ಲೆತ್ತಲೊಲ್ಲೆಯಾದರೆ;
ನಿನ್ನೆದೆ ನರ ನಾಡಿಗಳಳಿದ ಮೇಲೂ ನಿನ್ನ
ಕರ್ತವ್ಯಗಳಿಗವನ್ನು ಒತ್ತಾಯಿಸಿ
ಅವಕೆ ತಡೆ ಎಂದಾಜ್ಞಾಪಿಸುವ ಸಂಕಲ್ಪವಲ್ಲದೆ
ನಿನ್ನಲ್ಲೇನೂ ಉಳಿದಿಲ್ಲದಾಗ್ಯೂ ಕೈಬಿಡಲಾರೆಯಾದರೆ;

ಮಂದಿಯೊಡನೆ ಮಾತಾಡಿಯೂ ನಿನ್ನ ಸದ್ಗುಣವ ಕಾಪಾಡಬಲ್ಲೆಯಾದರೆ,
ರಾಜರೊಡನಾಟದಲ್ಲೂ ಸಾಮಾನ್ಯರ ಸಂಪರ್ಕವ ಬಿಡಲೊಲ್ಲೆಯಾದರೆ;
ಶತ್ರುವೂ ಪ್ರಿಯಮಿತ್ರನೂ ನಿನ್ನ ನೋಯಿಸಲಾರರಾದರೆ;
ಪ್ರತಿಯೋರ್ವರೂ ಗಣ್ಯರಾಗಿ, ಆದರೆ ಒಬ್ಬರೂ ಬಹಳವಾಗಲ್ಲದಿದ್ದರೆ,
ನಿಷ್ಕರುಣಿ ನಿಮಿಷದಲಿ ಅರವತ್ತು
ಕ್ಷಣಗಳ ಓಟವ ತುಂಬಬಲ್ಲೆಯಾದರೆ -
ನಿನ್ನದೀ ಭುವಿ ಮತ್ತದರೊಳಗಣದೆಲ್ಲ,
ಅದ ಮೀರಿ, ಮಗು, ನೀ ಮನುಷ್ಯನಾಗುವೆ ದಿಟ!

ಇದು ರಡ್ಯಾರ್ಡ್ ಕಿಪ್ಲಿಂಗ್ ಅವರ If ಎಂಬ ಪದ್ಯದ ಭಾಷಾಂತರ.

This is the Kannada translation of Rudyard Kipling's poem "If"
If you cannot read the text in Kannada above, please click on the image below to get an enlarged image,