Friday, March 21, 2025

ಜಗಲೂರಿನ ವಡ್ಡರ ತಿಮ್ಮ



ನಾನು ಮೊದಲ ಬಾರಿ "ನಮ್ಮೂರಿಗೆ" ಹೋದದ್ದು ನನ್ನ ಇಪ್ಪತ್ತನೆಯ ವಯಸ್ಸಿನಲ್ಲಿ. ಅದು ನಮ್ಮ ತಂದೆಯವರ ಊರು - ಜಗಲೂರು. ಆ ಊರಿನ ಮತ್ತು  ಅಲ್ಲಿನ ವ್ಯಕ್ತಿಗಳ ಕತೆಗಳನ್ನು ನಮ್ಮ ತಂದೆ (ನಾವು ಅವರನ್ನು ಅಣ್ಣ ಎಂದು ಕರೆಯುತ್ತಿದ್ದೆವು. ಇನ್ನು ಮುಂದೆ ಅಣ್ಣ ಎಂದೇ ಹೇಳುತ್ತೇನೆ) ಬಹಳ ಸ್ವಾರಸ್ಯಕರವಾಗಿ ಅಗಾಗ್ಗೆ ಹೇಳುತ್ತಿದ್ದುದರಿಂದ ಅದರ ಚಿತ್ರವೊಂದು ನನ್ನ ಮನಸಿನಲ್ಲಿ ಮೂಡಿ ಬಿಟ್ಟಿತ್ತು. ಅಲ್ಲದೆ ಅದು ನಮ್ಮ ಊರು ಅನ್ನುವ ಭಾವನೆ ಬೆಳೆದು ಬಿಟ್ಟಿತ್ತು. ಈಗ ಯೋಚಿಸಿದರೆ ನನಗೇ ಅದು ಹಾಸ್ಯಾಸ್ಪದ ಎನಿಸುತ್ತದೆ.  ಇದನ್ನು ಓದುತ್ತಿರುವ ನಿಮಗೆ ಅದು ಹಾಸ್ಯಾಸ್ಪದ ಎನಿಸಿದರೆ ನನ್ನದೇನೂ ತಗಾದೆ ಇಲ್ಲ.

ಜಗಲೂರಿಗೆ ಹೋಗಿ, ಅಣ್ಣನ ಮನೆ, ಮನೆಯಿದ್ದ ರಸ್ತೆ, ಕೆರೆ, ರಾಮಮಂದಿರ, "ಸೀನೀರ್ಬಾವಿ" ಇವುಗಳನ್ನೆಲ್ಲ ನೋಡುತ್ತಿದ್ದರೆ ಅವು ಸಂಪೂರ್ಣ ಹೊಸದೂ,  ಚಿರಪರಿಚಿತವೂ ಎನಿಸಿದ್ದವು. ಆಲ್ಲಿದ್ದಾಗಿನ ಘಟನೆಗಳಲ್ಲಿ ಕೆಲವು ಇನ್ನೂ ಹಚ್ಚ ಹಸಿರಾಗಿ ನನ್ನ ಮನಸ್ಸಿನಲ್ಲಿ ಉಳಿದಿವೆ - ಸುಮಾರು ಐವತ್ತು ವರ್ಷಗಳ ನಂತರವೂ ಸಹ. ಅವುಗಳಲ್ಲಿ ಕೆಲವನ್ನು ಹಂಚಿಕೊಳ್ಳುವ ಪ್ರಯತ್ನ ಇದು.

ಅಣ್ಣನ ಪ್ರೀತಿಪಾತ್ರ ಚಿಕ್ಕಪ್ಪನವರೂ, ವಿದ್ಯಾಗುರುಗಳೂ ಆದ "ರಾಘ್ಕಕ್ಕ" ಆಗ ಇನ್ನೂ ಅಲ್ಲಿದ್ದರು. ಅವರು ನಮ್ಮ ತಾತನ ಸೋದರಸಂಬಂಧಿ. ರಾಘ್ಕಕ್ಕ ಆವರನ್ನು ಎಂದೂ ಕಾಣದೆಯೇ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ಜಗಲೂರಿನ ಶಾಲೆಯಲ್ಲಿ ಅವರು ಮೇಷ್ಟ್ರಾಗಿದ್ದು ಅಣ್ಣನಿಗೆ ಪಾಠ ಹೇಳಿದ್ದರು.  ಅಣ್ಣನ ಪ್ರಕಾರ ಅಣ್ಣ ಒಳ್ಳೆಯ ಇಂಗ್ಲಿಷ್ ಕಲಿತಿದ್ದಕ್ಕೆ ರಾಘ್ಕಕ್ಕನವರೇ ಕಾರಣ.  ನಮ್ಮ ತಾತನವರಿಗೇ ಅಣ್ಣನ ಮೇಲೆ ಸಕಾರಣದಿಂದ ವಿಶ್ವಾಸ ಕಳೆದು ಹೋಗಿದ್ದ ಕಾಲದಲ್ಲಿ ರಾಘ್ಕಕ್ಕ ವಿಶ್ವಾಸವಿಟ್ಟು ಇವನು ಬುದ್ಧಿವಂತ, ಮುಂದೆ ಉದ್ಧಾರವಾಗುತ್ತಾನೆ ಎಂಬ ಭರವಸೆ ಇಟ್ಟುಕೊಂಡು, ಅಣ್ಣನ ವಿದ್ಯಾಭ್ಯಾಸ ಮುಂದುವರಿಯಬೇಕೆಂದು ನಮ್ಮ ತಾತನವರ ಮೇಲೆ ಒತ್ತಾಯ ಮಾಡಿ ತಂದೆಯವರ ಭವಿಷ್ಯವನ್ನು ಕಾಪಾಡಿದವರು ಅವರು.

ರಾಘ್ಕಕ್ಕನವರ ಜೊತೆ, ಸಂಜೆ ರಾಮಮಂದಿರಕ್ಕೆ ಹೋಗಿದ್ದೆ.  ಎಲ್ಲ ರಾಮಮಂದಿರಗಳಂತೆ ಅದೂ ನಿರಾಡಂಬರವಾಗಿತ್ತು. ಅದರ ಆಡಳಿತದ ಜವಾಬ್ದಾರಿ ಹೊತ್ತವರಲ್ಲಿ, ರಾಘ್ಕಕ್ಕನವರೂ ಒಬ್ಬರು. ರಾಮಮಂದಿರದಲ್ಲಿದ್ದ ಒಂದು ಟ್ಯೂಬ್ ಲೈಟ್ ಕೆಲಸಮಾಡುತ್ತಿರಲಿಲ್ಲ. ಯಾರೋ ಅಲ್ಪ ಸ್ವಲ್ಪ ತಿಳಿದವರು ಅದರ ಸ್ಟಾರ್ಟರ್ ಹೋಗಿದೆ, ಬೇರೆ ಹಾಕಿದರೆ ಕೆಲಸ ಮಾಡಬಹುದು ಅಂದಿದ್ದರಂತೆ. ಯಾರೋ ಒಂದು ಸ್ಟಾರ್ಟರ್ ತರಿಸಿಯೂ ಇಟ್ಟಿದ್ದರು. ಆದರೆ ಎತ್ತರದ ಸ್ಟೂಲ್ ಹತ್ತಿ ಹೊಸ ಸ್ಟಾರ್ಟರ್ ಹಾಕುವ ಸಾಮರ್ಥ್ಯ ಅಲ್ಲಿದ್ದ ಹಿರಿಯರಿಗ್ಯಾರಿಗೂ ಇರಲಿಲ್ಲವಾಗಿ, ಊರಿನ ಎಲೆಕ್ಟ್ರೀಷಿಯನ್ನುಗಳಿಗೆ ಇದು ತೀರ ಚಿಲ್ಲರೆ ಕೆಲಸವಾಗಿದ್ದು ಯಾರೂ ಅತ್ತ ಸುಳಿದಿರಲಿಲ್ಲ. ಅದು ವಾರಗಟ್ಟಲೆ ಹಾಗೇ ಉಳಿದಿತ್ತು.

ರಾಘ್ಕಕ್ಕ "ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದ್ತಿದ್ದೀಯ. ಈ ಸ್ಟಾರ್ಟರ್ ಬದಲಾಯಿಸಕ್ಕೆ ಬರುತ್ತೋ?" ಎಂದು ನನ್ನನು ಬಹಳ ಸಂಕೋಚದಿಂದ ಕೇಳಿದರು! ನನಗೆ ಅ ಹಿರಿಯರ ಸಂಕೋಚ ನೋಡಿ ಅಯ್ಯೋ ಅನಿಸಿತು. ಸ್ಟೂಲ್ ತಂದು, ಮೇಲೆ ಹತ್ತಿ ಸ್ಟಾರ್ಟರ್ ಬದಲಾಯಿಸಿದೆ. ದೀಪ ಹತ್ತಿತು. ಅವರಿಗೂ. ರಾಮಮಂದಿರದ ಅರ್ಚಕರಿಗೂ ಆದ ಸಂತೋಷ ಹೇಳತೀರದು. ಅವರಿಬ್ಬರೂ ನನ್ನ ಮೇಲೆ ಅವರ ಮತ್ತು ರಾಮನ ಆಶೀರ್ವಾದಗಳನ್ನು ಯಥೇಚ್ಚವಾಗಿ ಸುರಿದರು. ಈಗಲೂ ಅವರ ಅಸಹಾಯಕತೆ ಅಮಾಯಕತೆಗಳನ್ನು ನೆನೆಸಿಕೊಂಡರೆ ಛೇ ಅನ್ನಿಸುತ್ತದೆ.

ಎರಡನೆಯದು, ಅಣ್ಣನ ಅಪ್ತಮಿತ್ರರಾಗಿದ್ದ ಶ್ರೀ ಫ಼ಕೀರ್ ಸಾಹೇಬರ ತಂದೆ ಶ್ರೀ ಕಾಸಿಮ್ ಸಾಹೇಬರ ಮನೆಗೆ ನಾನು ಮತ್ತು ನನ್ನಕ್ಕ ಹೋಗಿ ಅವರನ್ನು ಕಂಡದ್ದು.  ಆಗ ಸಾಹೇಬರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆವರೊಡನೆ ಒಂದರ್ಧ ಘಂಟೆ ಮಾತನಾಡಿದೆವು. ಅವರ ಮಾತಿನಲ್ಲಿ ಅವರಿಗೆ ಅಣ್ಣನ ಮೇಲಿದ್ದ ಪ್ರೀತಿ, ಅಭಿಮಾನಗಳು ಎದ್ದು ಕಾಣುತ್ತಿದ್ದವು. ನಾವು ಅವರ ಮನೆಯಿಂದ ಹೊರಟಾಗ ಅವರ ಸೊಸೆ ಒಳಗೆ ಹೋಗಿ, ಒಂದು ತಟ್ಟೆಯಲ್ಲಿ ಕುಂಕುಮ, ಎಲೆ ಅಡಿಕೆ, ತೆಂಗಿನಕಾಯಿಗಳನ್ನು ತಂದು, ಅಕ್ಕನ ಹಣೆಗೆ ಕುಂಕುಮ ಇಟ್ಟು, ಎಲೆ ಅಡಿಕೆ, ತೆಂಗಿನಕಾಯಿ ಕೊಟ್ಟು ಕಳಿಸಿದ್ದು ಕಣ್ಣಿಗೆ ಕಟ್ಟಿದಂತಿದೆ.

ಮೂರನೆಯದು ಇದು. ಜಗಲೂರಿನಲ್ಲಿ ನಾವು ತಂಗಿದ್ದು ಅಣ್ಣನ ಸೋದರ ಸಂಬಂಧಿ ಜಗಲೂರು ರಾಮಚಂದ್ರ ಅವರ ಮನೆಯಲ್ಲಿ.  ನಾವು ಅವರನ್ನು ದೊಡ್ಡಪ್ಪ ಎಂದು ಕರೆಯುತ್ತಿದ್ದೆವು. ಅಕ್ಕ, ನಾನು ಚಿತ್ರದುರ್ಗಕ್ಕೋ ಇನ್ನೆಲ್ಲಿಗೋ ಹೋಗಿ ಜಗಲೂರಿಗೆ ಹಿಂದಿರುಗಿದಾಗ ಸಂಜೆ ಸುಮಾರು ಏಳರ ಸಮಯ.  ಮಬ್ಬುಗತ್ತಲು. ಅವರ ಮನೆಯ ಮುಂದೆ ಚರಂಡಿಯ ಪಕ್ಕದಲ್ಲಿ ಹಣ್ಣು ಹಣ್ಣು ಮುದುಕನೊಬ್ಬ ಕುಕ್ಕರುಗಾಲಿನಲ್ಲಿ ಕುಳಿತಿದ್ದ. ನಾವು ಬಂದಕೂಡಲೆ ದೊಡ್ಡಪ್ಪ,  "ತಿಮ್ಮನ್ನ ಕರ್ಸಿದೀನಿ" ಅಂದರು. ಅಣ್ಣ ತಿಮ್ಮನ ಕುರಿತ ಅನೇಕ ಪ್ರಸಂಗಗಳನ್ನು ನಮಗೆ ಅಗಾಗ್ಗೆ ಹೇಳಿದ್ದಿದ್ದರಿಂದ ಆತ ನಮಗೆ ಪರಿಚಯವಾಗಿದ್ದ. ಆದ್ದರಿಂದ ಆತನನ್ನು ಕಂಡಿದ್ದು ನಮಗೆ ಅತ್ಯಂತ ಸಂತೋಷದ ವಿಷಯ  ಮತ್ತು ಆಶ್ಚರ್ಯ ಕೂಡ.  ನಮ್ಮ ತಾತನವರಾದ ಜಗಲೂರು ರಾಘವೇಂದ್ರ ರಾಯರ ಮನೆಯಲ್ಲಿ ಕೆಲಸಕ್ಕಿದ್ದ ಆಳು, ತಿಮ್ಮ. ವಡ್ಡರ* ತಿಮ್ಮ ಅಥವ ಒಡ್ಡರ ತಿಮ್ಮ ಎಂದು ಅವನ ಪರಿಚಯ. ನಮ್ಮ ತಾತನವರ ಆಪ್ತ ಕೆಲಸಗಾರ. ಅವನ ವಯಸ್ಸು ಎಷ್ಟೋ ಅವನಿಗೇ ಗೊತ್ತಿರಲಿಲ್ಲ. **

ತಾತ ಊರಿನ ಮುಖ್ಯಸ್ಥರಲ್ಲೊಬ್ಬ್ಬರು. ಅವರಿಗೆ "The uncrowned king of Jagalur" ಎನ್ನುವ ಅನಧಿಕೃತ ಉತ್ಪ್ರೇಕ್ಷಿತ ಬಿರುದೂ ಇತ್ತೆಂದು ಪ್ರತೀತಿ. ಅವರಿಗೆ ಪಾರಂಪರಿಕವಾಗಿ ಯಾವುದೋ ಹಳ್ಳಿಯ ಶ್ಯಾನುಭೋಗಿಕೆ (ಹಳ್ಳಿಯ ಲೆಕ್ಖಪತ್ರ ಇಡುವ ಕೆಲಸ) ಇದ್ದರೂ ಅದನ್ನು ಬಿಟ್ಟು ಜಗಲೂರಿನಲ್ಲಿದ್ದರು. ಅವರ ಮನೆಯ ಜಗಲಿಯೇ ಅವರ ಕೆಲಸದ ಸ್ಥಳ. ಆಗಿನಿಂದಲೇ work from home! ವೃತ್ತಿಯಲ್ಲಿ ಅವರನ್ನು ಫೂಟ್ಲಾಯರಿ ಅನ್ನಬಹುದು. ಅಂದರೆ ಪದವೀಧರರಲ್ಲದ ವಕೀಲರು. ಜಮೀನು ಮಾರಾಟದ ಪತ್ರ, ಸಾಲದ ಪತ್ರ ಇವುಗಳನ್ನು ಬರೆದು ಕೊಡುವುದು, ಆಸ್ತಿ ವಿಭಜನೆ ಮಾಡಿಕೊಡುವುದು ಇತ್ಯಾದಿ ಅವರ ಆದಾಯದ ಮೂಲ. ಇದರಲ್ಲಿ ಬಹಳ ಒಳ್ಳೆಯ ಹೆಸರು ಮಾಡಿ ಜನಮನ್ನಣೆಗೆ ಪಾತ್ರರಾದವರು ತಾತ. ಪ್ರತಿದಿನ ಬೆಳಿಗ್ಗೆ ಮನೆಯ ಜಗಲಿಯ ಒಪ್ಪ ಓರಣ, ಜಮಖಾನೆ ಹಾಸಿ, ತಾತ ಕುಳಿತುಕೊಳ್ಳಲು, ಒರಗಿಕೊಳ್ಳಲು, ದಿಂಬುಗಳನ್ನಿಟ್ಟು, ಅವರ ಡೆಸ್ಕ್ ಇಟ್ಟು, ಮಸಿ ಕುಪ್ಪಿಗೆ ಮಸಿ ತುಂಬಿಸಿ ಇಟ್ಟು ಇತ್ಯಾದಿ ಕೆಲಸಗಳಿಂದ ಪ್ರಾರಂಭವಾದ ತಿಮ್ಮನ ದಿನ, ರಾತ್ರಿ ಕಂದೀಲು, ಬುಡ್ಡಿ ದೀಪಗಳನ್ನೆಲ್ಲ ಒರೆಸಿ, ಕಲ್ಲೆಣ್ಣೆ ತುಂಬಿ, ದೀಪ ಬೆಳಗಿಸುವುದರಿಂದ ಮುಗಿಯುತ್ತಿತ್ತು.

ಆ ವಯೋವೃದ್ಧ ತಿಮ್ಮನನ್ನು ನಾವು ನೋಡಬೇಕು ಎಂದು ದೊಡ್ಡಪ್ಪ ಅವನಿಗೆ ಬರಹೇಳಿದ್ದರು. ಎತ್ತಿನ ಗಾಡಿ ಕಟ್ಟಿಕೊಂಡು ಆ ಪಾಪದ ಮುದುಕ ಬಂದು ನಮಗೆ ಕಾಯುತ್ತಾ ಕುಳಿತಿದ್ದ! ಅದನ್ನು ಕೇಳಿ ಹೊಟ್ಟೆ ಕಿವಿಚಿದಂತಾಯ್ತು. ನಾವು ಆತನನ್ನು ನೋಡಿದ ಮೇಲೆ ಆತ ಎಂಟು ಹತ್ತು ಕಿಲೋಮೀಟರ್ ದೂರದ ಅವನ ಊರಿಗೆ ಹಿಂತಿರುಗಬೇಕು ! ಎಂಥ ಕ್ರೌರ್ಯ ಎನಿಸಿತು. ಅಷ್ಟೇ ಸಾಲದು ಅನ್ನುವಂತೆ, ದೊಡ್ಡಪ್ಪ ಎತ್ತರದ ಧ್ವನಿಯಲ್ಲಿ ತಿಮ್ಮನನ್ನು ಕೇಳಿದರು - ಕಿವಿ ಸರಿಯಾಗ್ಗಿ ಕೇಳಿಸದ ತಿಮ್ಮನಿಗೆ ಕೇಳಲಿ ಎಂದು - "ಇವರು ಯಾರು ಗೊತ್ತೇನು?" ಆತ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದ. "ರಾಘಣ್ಣನ ಮೊಮ್ಮಕ್ಕಳು, ಅಚ್ಚಣ್ಣನ ಮಕ್ಕಳು." ಅಂದರು ದೊಡ್ಡಪ್ಪ. (ಆಚ್ಚಣ್ಣ, ಅಣ್ಣನನ್ನು ಎಲ್ಲರೂ ಕರೆಯುತ್ತಿದ್ದ ಹೆಸರು. ಲಕ್ಶ್ಮಣ ಹೋಗಿ ಅಚ್ಚಣ್ಣ ಆಗಿತ್ತು. ಕಿರಿಯರಿಗೆಲ್ಲ ಅಣ್ಣ ಅಚ್ಚುಮಾವ ಆಗಿದ್ದರು.) ಆ ಮುದುಕನನ್ನು ನಿಷ್ಕರುಣೆಯಿಂದ ಬರಹೇಳಿದ್ದರಿಂದ ಚಡಪಡಿಸುತ್ತಿದ್ದ ನಮಗೆ ಇನ್ನೊಂದು ಆಘಾತ ಕಾದಿತ್ತು. ಕೂತಲ್ಲಿಂದ ಎದ್ದು ಬಂದ ತಿಮ್ಮ, ದೂಳು ರಸ್ತೆಯನ್ನೂ ಲೆಕ್ಕಿಸದೆ ನಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಿ ಬಿಟ್ಟ.

ತಾತನ ಮೇಲಿದ್ದ ಮರ್ಯಾದೆಯೋ, ಅಣ್ಣನ ಮೇಲಿದ್ದ ಪ್ರೀತಿಯೋ, ತಲೆತಲಾಂತರದಿಂದ ಮೇಲು - ಕೀಳು ಭಾವನೆಯೋ ಅವೆಲ್ಲದರ ಕಲಸುಮೇಲೋಗರವೋ ಗೊತ್ತಿಲ್ಲ, ನಮ್ಮ ತಾತನ ವಯಸ್ಸಿನ ಮುದುಕ ನಮ್ಮ ಕಾಲು ಮುಟ್ಟಿದ್ದ.

ಈಗಲೂ ಅದನ್ನು ನೆನೆಸಿಕೊಂಡರೆ ಅತೀವ ವೇದನೆಯಾಗಿ ಕಣ್ಣು ತೇವವಾಗುತ್ತವೆ,


*ಶ್ರೀ ವಿ ಕೃಷ್ಣ ವಿರಚಿತ ಅಲರ್ ನಿಘಂಟು (https://alar.ink/) ವಡ್ಡ ಎನ್ನುವ ಪದಕ್ಕೆ ಈ ಅರ್ಥ ನೀಡುತ್ತದೆ
 
ವಡ್ಡ
  1. a class of persons engaged in cutting stone, road-work, digging tanks etc.
  2. a member of this class.
 
**ಅಣ್ಣನ ಬಾಲ್ಯದಲ್ಲಿ ಯಾರೋ ಮುದುಕನನ್ನ ನಿನ್ನ ವಯಸ್ಸೆಷ್ಟು ಎಂದು ಕೇಳಿದ್ದರಂತೆ. ಅವನ ಉತ್ತರ, "ನಂಗೊತ್ತಿಲ್ಲ. ಆದರೆ ದಂಗೆ ಆದಾಗ ಆಗ್ತಾನೆ ಬೀಡಿ ಸೇದಕ್ಕೆ ಷುರು ಮಾಡೋ ವಯಸ್ಸು".  ದಂಗೆ ಎಂದರೆ ಮೊದಲನೆ ಸ್ವಾತಂತ್ರ ಸಂಗ್ರಾಮ - 1857. ಬೀಡಿ ಸೇದಕ್ಕೆ ಷುರು ಮಾ



Monday, March 17, 2025

ನಂಗೊತ್ತಿರೋ ಗಾದೆಗಳು ನಾ ಕೇಳಿರೋ ಗಾದೆಗಳು

 

 

ಇಷ್ಟೇ ಅಲ್ಲ, ಜ್ಞಾಪಕ ಬಂದ ಹಾಗೆ ಸೇರಿಸ್ತಿರ್ತೀನಿ

ಇವುಗಳಲ್ಲಿ ಹಲವು ಉಪಮೆಗಳು. ಆದರೆ ಬಳಕೆಯಲ್ಲಿ ಅವುಗಳು ಗಾದೆಗಳನ್ನು ಹೋಲುವುದರಿಂದ ಅವನ್ನೂ ಸೇರ್ಸಿದೀನಿ. ಅಲ್ಲದೆ ಕೆಲವು ಸಂಸ್ಕೃತದ ನಾಣ್ಣುಡಿಗಳನ್ನೂ ಸೇರ್ಸಿದೀನಿ, ಯಾಕಂದ್ರೆ ಅವು ಕನ್ನಡದ್ದೇನೋ ಅನ್ನೋ ಹಾಗೆ ಉಪಯೋಗಿಸ್ತಾರೆ.

 

1.            ಅಂಗೈಯಲ್ಲಿ ಬೆಣ್ಣೆಇಟ್ಕೊಂಡು ತುಪ್ಪಕ್ ಊರೆಲ್ಲ ಹುಡುಕಿದರಂತೆ

2.            ಅಂಬಲಿ ಕುಡ್ಯೋವ್ನಿಗೆ ಮೀಸೆ ಹಿಡ್ಯೋವ್ನೊಬ್ಬ

3.            ಅಕ್ಕಿಮೇಲ್ ಆಸೆ, ನೆಂಟ್ರ್ ಮೇಲ್ ಪ್ರೀತಿ

4.            ಅಗಸ ಹೊಸದ್ರಲ್ ಗೋಣಿ ಎತ್ತೆತ್ತ್ ಒಗೆದ್ನಂತೆ

5.            ಅಗಸರ ಕತ್ತೆ ದೊಂಬರಿಗೆ ತ್ಯಾಗ

6.            ಅತ್ತೆಗೊಂದ್ಕಾಲ ಸೊಸೆಗೊಂದ್ಕಾಲ

7.            ಅಪ್ಪ ಹಾಕಿದ್ ಆಲದ್ಮರ ಅಂತ ಅದಕ್ ನೇಣು ಹಾಕಿಕೊಳ್ಳಕ್ಕಾಗತ್ಯೇ?

8.            ಅಪ್ಪಾಭಟ್ಟ್ರ ಮಗಳಾಗಿ, ತಿಪ್ಪಾಭಟ್ಟ್ರ ಸೊಸೆಯಾಗಿ, ಪಂಚ ಪಾಂಡವರು ಅಂದ್ರೆ ನಂಗೊತ್ತಿಲ್ವ, ಮಂಚದ ಕಾಲಿನ ಹಾಗೆ ಮೂರ್ಜನ ಅಂದು ಎರಡು ತೋರ್ಸಿ ಒಂದು ಬರೆದ್ಲಂತೆ.

9.            ಅಯ್ಯಣ್ಣನ ಕುದುರೆಗೆ ಮೈಯೆಲ್ಲ ಗಾಯ

10.         ಅಲ್ಪನಿಗ್ ಐಶ್ವರ್ಯ ಬಂದ್ರೆ ಮಧ್ಯ ರಾತ್ರಿಲಿ ಕೊಡೆ ಹಿಡಿದ

11.         ಅವ್ರಿವ್ರ್ ಮಾತ್ಕೇಳ್ಬೇಡ ನನ್ಮಾತ್ಕೇಳು, ನಡುಬೀದೀಲ್ನಿಂತ್ಕೊಂಡು ಪುಡಿಮಣ್ಣು ಹುಯ್ಕೊ ಅಂದ್ರಂತೆ

12.         ಅಳೋ ಗಂಡ್ಸನ್ನ ನಗೋ ಹೆಂಗ್ಸನ್ನ ನಂಬ ಬಾರ್ದು

13.         ಆಂಜನೇಯನೇ ಹಗ್ಗ ಕಡೀತಿರ್ಬೇಕಾದ್ರೆ ನಮ್ಗೆಲ್ಲಿಂದ ಶ್ಯಾವಿಗೆ ಕೊಡ್ತಾನೆ!?

14.         ಆಡಿದ್ದೇ ಆಡೋ ಕಿಸಿಬಾಯಿ ದಾಸಯ್ಯ

15.         ಆನೆ ಹೊಟ್ಟೆ, ಸೂಜಿ ಗಂಟ್ಳು

16.         ಆರಂಭ ಶೂರತ್ವ

17.         ಆರಕ್ಕೆ ಹತ್ತಲ್ಲ, ಮೂರಕ್ಕೆ ಇಳಿಯಲ್ಲ

18.         ಆಷ್ಟರ ಮಟ್ಟಿಗೆ ಕಂಡ್ರಾ ಕೃಷ್ಣಂಭಟ್ಟ್ರೇ, ಮುಪ್ಪಿನ ಕಾಲಕ್ಕೆ ಮೂರ್ಜನ ಹೆಂಡ್ರು

19.         ಆಳ್ ಮಾಡಿದ್ ಕೆಲ್ಸ ಹಾಳು

20.         ಇದ್ದಿದ್ ಇದ್ದಂಗ್ಹೇಳಿದ್ರೆ ಕೆಂಡ್ದಂತಾ ಕೋಪ

21.         ಇರಳ್ಕಂಡ್ಭಾವೀಲ್ ಹಗಲ್ಬಿದ್ರಂತೆ

22.         ಈಚಲು ಮರದ ಕೆಳಗೆ ನಿಂತು ಮಜ್ಜಿಗೆ ಕುಡ್ದಂಗೆ

23.         ಉಡಕ್ಕಿಲ್ದವಳು ಪಟ್ಟೆ ಸೀರೆ ತೆಗೆದ್ಲಂತೆ

24.         ಉದ್ದುದ್ದೋರ್ಗ್ ಬುದ್ಧಿ ಇಲ್ಲ

25.         ಊಟಕ್ಕಿಲದ್ ಉಪ್ಪಿನ್ಕಾಯಿ

26.         ಊದೋದು ಕೊಟ್ಟು ಬಾರ್ಸೋದು ತೊಗೊಂಡ್ರಂತೆ

27.         ಊರು ಕೊಳ್ಳೆಹೋದ್ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ

28.         ಎಂಟ್ ವರ್ಷಕ್ ಮಗ ದಂಟು ಅಂದ

29.         ಎಕ್ಕಡನ ರೇಶಿಮೆ ಶಾಲಲ್ಲಿ ಸುತ್ತಿ ಹೊಡೆದ್ರಂತೆ

30.         ಎತ್ತು ಏರಿಗೆಳೀತು ಕೋಣ ನೀರ್ಗೆಳೀತು

31.         ಎದ್ರಾ ಬಾಹ್ಮಣ್ರೆ ಅಂದ್ರೆ ಗುದ್ದಾಟಕ್ಕೆ

32.         ಎಲ್ಲಾರ್ಮನೆ ದೋಸೇನೂ ತೂತೇ

33.         ಏತಿ ಅಂದ್ರೆ ಪ್ರೇತಿ

34.         ಏನೇ ಗಿಡ್ಡಿ ಓಡಾಟ, ಶಾನ್ಭೋಗ್ರ್ ಮನೇಲ್ ಹಬ್ದೂಟ

35.         ಏಲೆ ಎತ್ತೋ ಗುಂಡ ಅಂದ್ರೆ ಉಂಡವ್ರೆಷ್ಟ್ ಮಂದಿ

36.         ಒಂದ್ ಹೊತ್ತುಂಡವ ಯೋಗಿ, ಎರಡ್ ಹೊತ್ತುಂಡವ ಭೋಗಿ, ಮೂರ್ ಹೊತ್ತುಂಡವ ರೋಗಿ, ನಾಕ್ ಹೊತ್ತುಂಡವನ್ ಎತ್ಕೊಂಡ್ ಹೋಗಿ

37.         ಒಲ್ಲದ್ ಗಂಡಂಗ್ ಮೊಸರಲ್ ಕಲ್ಲು

38.         ಓತಿಕ್ಯಾತಕ್ಕೆ ಬೇಲಿ ಸಾಕ್ಷಿ

39.         ಕಂಡವ್ರ್ ಮಕ್ಕಳ್ನ್ ಬಾವೀಗ್ತಳ್ಳಿ ಆಳನೋಡೋದು

40.         ಕಪ್ಪೇನ ತಕಡೀಲ್ ಹಾಕ್ದಂಗೆ

41.         ಕಳ್ಳನ್ ನಂಬಿದ್ರೂ ಕುಳ್ಳನ್ ನಂಬಾರ್ದು

42.         ಕಳ್ಳನ್ಮನಸ್ಸು ಹುಳ್ಹುಳ್ಗೆ

43.         ಕಾಗೆ ಕಾ ಅನ್ನಕ್ಮುಂಚೆ ಬಡಿದು ಬಾಯಿಗೆ ಹಾಕ್ಕೊಂಡ್ರಂತೆ.

44.         ಕಾಗೆ ವಾಂತಿ ಮಾಡಿದ ಕತೆ

45.         ಕಾರ್ಯವಾಸಿ ಕತ್ತೆಕಾಲ್ಕಟ್ಟು

46.         ಕಾಲು ಸುಟ್ಟ ಬೆಕ್ಕಿನ ತರಹ

47.         ಕಾಸಿಗೆ ಹೋದ ಮಾನ ಆನೆ ಕೊಟ್ರೂ ಬರ್ದು

48.         ಕುಂಬಳ್ಕಾಯ್ ಕಳ್ಳ ಅಂದ್ರೆ ಹೆಗಲ್ ಮುಟ್ ನೋಡ್ಕೊಂಡ್ನಂತೆ

49.         ಕುಂಬಾರಂಗ್ ಒಂದ್ ವರ್ಷ, ದೊಣ್ಣೇಗ್ ಒಂದ್ನಿಮ್ಷ

50.         ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಲಂತೆ

51.         ಕುದುರೆ ಕಂಡ್ರೆ ಕಾಲ್ನೋವು

52.         ಕುಲಗೆಟ್ರೂ ಸುಖವಿಲ್ಲ

53.         ಕೂತು ಉಂಡ್ರೆ ಕುಡ್ಖೆ ಹಣ ಸಾಲ್ದು

54.         ಕೂಸ್ ಹುಟ್ಟಕ್ಮುಂಚೆ ಕುಲಾವಿ ಹೊಲ್ದ್ರಂತೆ

55.         ಕೆಲಸ್ವಿಲ್ಲದ್ಕುಂಬಾರ ಮಗನ್ಕುಂಡೆ ತಟ್ಟಿದ್ನಂತೆ

56.         ಕೆಲಸ್ವಿಲ್ಲದ್ಬಡ್ಗಿ ಮಗನ್ ಕುಂಡೆ ಕೊರೆದ್ನಂತೆ

57.         ಕೈ ಕೆಸರಾದರೆ ಬಾಯ್ ಮೊಸರು

58.         ಕೊಂಕಣ ಸುತ್ತಿ ಮೈಲಾರಕ್ಕೆ

59.         ಕೋಣನ್ಮುಂದೆ ಕಿಂದರಿ ನುಡಿಸ್ದಂಗೆ(ಬಾರಿಸ್ದಂಗೆ)

60.         ಕೋತಿ ತಾನ್ಕೆಡೋದಲ್ದೆ ವನನೆಲ್ಲ ಕೆಡಿಸ್ತಂತೆ

61.         ಕೋತಿ ಮೊಸರನ್ನ ತಿಂದ್ ಹೋತದ್ ಗಡ್ಡಕ್ ಮೆತ್ತಿತಂತೆ

62.         ಕೋಲು ಮುರಿಬಾರ್ದು, ಹಾವು ಸಾಯ್ಬಾರ್ದು

63.         ಗಂಡ್ ಹೆಂಡ್ರ್ ಜಗಳ್ದಲ್ ಕೂಸ್ ಬಡ್ವಾಯ್ತು

64.         ಚಾಪೆ ಕೆಳಗ್ ನುಗ್ಗಿದ್ರೆ ರಂಗೋಲೆ ಕೆಳಗ್ ನುಗ್ಗಿದ್ರಂತೆ

65.         ಜಗಲಿ ಹಾರಿ, ಗಗನ ಹಾರಬೇಕು

66.         ಜಾಣ ಕಿವುಡು

67.         ತಾಯಿಯಂತೆ ಮಗಳು ನೂಲ್ನಂತೆ ಸೀರೆ

68.         ತುಂಬಿದ್ ಕೊಡ ತುಳ್ಕಲ್ಲ

69.         ದಿನಾ ಸಾಯೋವ್ರಿಗ್ ಅಳೋವ್ರ್ಯಾರು

70.         ದುಷ್ಟ್ರನ್ಕಂಡ್ರೆ ದೂರ ಇರು

71.         ದೂರದ ಬೆಟ್ಟ ಕಣ್ಣಿಗ್ ನುಣ್ಣ್ಗೆ

72.         ದೇವ್ರು ವರ ಕೊಟ್ರೂ ಪೂಜಾರಿ ಕೊಡ

73.         ಧರ್ಮಕ್ ದಟ್ಟಿ ಕೊಟ್ರೆ ಹಿತ್ತಲ್ಗ್ ಹೋಗಿ ಮೊಳ ಹಾಕಿದ್ರಂತೆ

74.         ನವಿಲನ್  ನೋಡಿ ಕೆಂಭೂತ ಗರಿ ಕೆದರ್ಕೊಂಡ್ ಕುಣೀತಂತೆ

75.         ನಾಯಿ ಬೊಗಳಿದ್ರೆ ದೇವ್ಲೋಕ ಹಾಳೆ?

76.         ನಾಯಿ ಹೆಸರು ಸಂಪಿಗೆ

77.         ನಾಯಿಬಾಲ ಡೊಂಕು

78.         ನಾಯೀಗ್ಯಾಕ್ ಶ್ಯಾಮಿಗೆ (ಶ್ಯಾವಿಗೆ) ಪಾಯ್ಸ್

79.         ಪಾಪಿ ಸಮುದ್ರಕ್ ಹೋದ್ರೂ ಮೊಣಕಾಲುದ್ದ ನೀರು

80.         ಪ್ರಾಣ ಹೋದ್ರೂ ಪರ್ವಾಗಿಲ್ಲ ಪ್ರಾಸ ಹೋಗ್ಲಿಲ್ಲ ಅಂದ್ನಂತೆ

81.         ಬಾಣ್ಲೆ ಇಂದ ಬೆಂಕೀಗ್ ಬಿದ್ದಂಗ್ ಆಯ್ತು

82.         ಬಾಯ್ಬಿಟ್ರ್ ಬಣ್ಣ್ಗೇಡು

83.         ಬಿಸಿತುಪ್ಪ, ನುಂಗೋಹಾಗಿಲ್ಲ ಉಗ್ಯೋಹಾಗಿಲ್ಲ

84.         ಬೀದೀಲ್ಹೋಗೋ ಮಾರಿ ಮನೇಗ್ಬ್ಂದ್ ಹೋಗವ್ವ

85.         ಬೀಸೋ ದೊಣ್ಣೆ ತಪ್ಪಿದ್ರೆ ನೂರ್ ವರ್ಷ ಆಯಸ್ಸು

86.         ಬೆಳೆಯುವ ಮರ ಮೊಳಕೆಯಲ್ಲಿ

87.         ಮಂಗನ ಕೈಲಿ ಮಾಣಿಕ್ಯ ಕೊಟ್ಟಂಗೆ

88.         ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೇ ನನ್ಹೆಂಡ್ತಿ ಅಂದ್ನಂತೆ

89.         ಮದ್ವೆ ಆಗೋತನಕ ಹುಚ್ ಬಿಡ್ದು, ಹುಚ್ ಬಿಡೋತನಕ ಮದ್ವೆ ಆಗ್ದು

90.         ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ

91.         ಮೌನಂ ಸಮ್ಮತಿ ಲಕ್ಷಣಂ

92.         ಯಥಾ ರಾಜ ತಥಾ ಪ್ರಜಾ

93.         ಯಾರ್ದೋ ಸೀರೆ ಎಲ್ಲವ್ವನ್ ಜಾತ್ರೆ

94.         ಯಾವ ಹುತ್ತದಲ್ಲಿ ಯಾವ ಹಾವೋ

95.         ರಾಮೇಶ್ವರಕ್ ಹೋದ್ರೂ ಶನೇಶ್ವರಕಾಟ ಬಿಡ್ದು

96.         ರಾವಣನ್ ಹೊಟ್ಟೇಗ್ ಅರ್ಕಾಸು ಮಜ್ಜಿಗೆ

97.         ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು

98.         ರೋಗಿ ಬಯ್ಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಅದೆ

99.         ವೇದ ಸುಳ್ಳಾದ್ರೂ ಗಾದೆ ಸುಳ್ಳಾಗ್ದು

100.       ವೇದಾಂತ ಅಂಬಲಿಕ್ಕೆ, ಬದನೆಕಾಯಿ ತಿಂಬ್ಲಿಕ್ಕೆ

101.       ಶುಭಸ್ಯ ಶೀಘ್ರಂ

102.       ಸನ್ಯಾಸಿ ಸಂಸಾರ

103.       ಸರ್ವ ಚಿತ್ತಾರ ಮಶಿ ನುಂಗಿತು

104.       ಸಾರ್ಸಿದ್ ಮನೇಲ್ ಬೋಳಪ್ ಹೇತ

105.       ಸ್ವತಃ ಬುದ್ಧಿ ಇಲ್ಲ, ಬೇರೇವ್ರು ಹೇಳಿದ್ರೆ ಕೇಳಲ್ಲ

106.       ಹಲ್ಲಿದ್ರೆ ಕಡ್ಲೆ ಇಲ್ಲ, ಕಡ್ಲೆ ಇದ್ರೆ ಹಲ್ಲಿಲ್ಲ

107.       ಹಳೇ ಗಂಡನ್ ಪಾದವೇ ಗತಿ

108.       ಹಾಗಾಲ್ಕಾಯ್ಗೆ ಬೇವಿನ್ಕಾಯ್ ಸಾಕ್ಷಿ

109.       ಹಾಸಿಗೆ ಇದ್ದಷ್ಟು ಕಾಲು ಚಾಚು

110.       ಹಿತ್ತಲ ಗಿಡ ಮದ್ದಲ್ಲ

111.       ಹುಚ್ಮುಂಡೆ ಮದುವೇಲ್ ಉಂಡವ್ನೇಜಾಣ

112.       ಹೆಂಡತಿ ದಾಕ್ಷಿಣ್ಯಕ್ಕೆ ಸಿಂಬಳ್ಬುರುಕ ಭಾವ್ಮೈದ್ನನ್ ಎಂಜ್ಲ್ ತಿಂದ್ನಂತೆ

113.       ಹೆತ್ತವರಿಗ್ ಹೆಗ್ಣ ಮುದ್ದು

114.       ಹೊಟ್ಟೇಗ್ ಹಿಟ್ಟಿಲ್ಲ ಜುಟ್ಟಿಗ್ ಮಲ್ಲಿಗೆ ಹೂವು

115.       ಹೊಸ ವೈದಂಗಿತ ಹಳೆ ರೋಗಿ ಮೇಲು

116.       ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಇಂದ